Ad
Home Local News ಮೇಕೆದಾಟಿಗೆ ಉತ್ತರ ಕನ್ನಡದ ಕಂದಾಯ ಭೂಮಿ? 

ಮೇಕೆದಾಟಿಗೆ ಉತ್ತರ ಕನ್ನಡದ ಕಂದಾಯ ಭೂಮಿ? 

0
3

ಅರಣ್ಯವಾಸಿಗಳ ಹಕ್ಕು ಬಾಕಿಯಿರುವಾಗ ಸರ್ಕಾರದ ನಡೆಗೆ ರವೀಂದ್ರ ನಾಯ್ಕ ವಿರೋಧ

ಶಿರಸಿ: ಜಿಲ್ಲೆಯಲ್ಲಿ ಭೂಮಿ ಹಕ್ಕಿಗಾಗಿ ಸಾವಿರಾರು ಮಂದಿ ಕಾಯುತ್ತಿದ್ದಾರೆ. ಅರಣ್ಯವಾಸಿಗಳು, ಹಂಗಾಮಿ ಸಾಗುವಳಿದಾರರು ಸೇರಿದಂತೆ ಅನೇಕರು ತಮ್ಮ ಬದುಕಿಗೆ ಆಧಾರವಾಗಿರುವ ಭೂಮಿಗೆ ಕಾನೂನುಬದ್ಧ ಹಕ್ಕುಪತ್ರಕ್ಕಾಗಿ ವರ್ಷಗಳಿಂದ ಹೋರಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೇರೆ ಜಿಲ್ಲೆಯ ಮೇಕೆದಾಟು ಯೋಜನೆಗೆ ಅರಣ್ಯ ಭೂಮಿಗೆ ಪರ್ಯಾಯವಾಗಿ ಉತ್ತರ ಕನ್ನಡ ಜಿಲ್ಲೆಯ ಉಳಿದಿರುವ ಕಂದಾಯ ಭೂಮಿಯನ್ನು ನೀಡುವ ಪ್ರಕ್ರಿಯೆ ಆರಂಭಿಸಿರುವುದು ಖಂಡನೀಯ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.

ಮೇಕೆದಾಟು ಯೋಜನೆಯಿಂದ ಅರಣ್ಯ ಭೂಮಿ ನಾಶವಾಗಲಿರುವ ಹಿನ್ನೆಲೆಯಲ್ಲಿ ಅದಕ್ಕೆ ಪರ್ಯಾಯವಾಗಿ ವಿವಿಧ ಜಿಲ್ಲೆಗಳಲ್ಲಿರುವ ಕಂದಾಯ ಭೂಮಿಯನ್ನು ಅರಣ್ಯಕ್ಕೆ ವರ್ಗಾಯಿಸುವ ಪ್ರಕ್ರಿಯೆ ನಡೆಯುತ್ತಿದೆ. ರಾಮನಗರ, ಮಂಡ್ಯ, ಚಾಮರಾಜನಗರ, ದಕ್ಷಿಣ ಕನ್ನಡ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಿ ಮತ್ತು ಡಿ ದರ್ಜೆಯ ಭೂಮಿಯನ್ನು ಪರ್ಯಾಯ ಅರಣ್ಯ ಭೂಮಿಯಾಗಿ ಗುರುತಿಸುವ ಕಾರ್ಯ ಪ್ರಾರಂಭವಾಗಿದೆ.

 ಇದೇ ಪ್ರಕ್ರಿಯೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಂದಾಯ ಭೂಮಿಯನ್ನೂ ಗುರುತಿಸಲಾಗುತ್ತಿದೆ ಎನ್ನುವುದು ರವೀಂದ್ರ ನಾಯ್ಕ ಅವರ ಆರೋಪವಾಗಿದೆ.

ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಸುಮಾರು ಶೇ.80ರಷ್ಟು ಭೂಭಾಗ ಅರಣ್ಯ ಪ್ರದೇಶದಿಂದ ಆವೃತವಾಗಿದೆ. ಉಳಿದಿರುವ ಕಂದಾಯ ಭೂಮಿಯಲ್ಲಿಯೇ ಜಿಲ್ಲೆಯ ಜನರ ಕೃಷಿ, ವಸತಿ ಸೇರಿದಂತೆ ಹಲವು ಅಗತ್ಯಗಳು ಅವಲಂಬಿತವಾಗಿವೆ. ಅದರಲ್ಲೂ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರಕ್ಕಾಗಿ ಸಾವಿರಾರು ಅರಣ್ಯವಾಸಿಗಳು ಕಾಯುತ್ತಿದ್ದಾರೆ.

1978ರ ಪೂರ್ವದ ಹಂಗಾಮಿ ಸಾಗುವಳಿದಾರರಿಗೂ ಭೂಮಿ ಹಕ್ಕು ನೀಡುವ ಪ್ರಶ್ನೆ ಇನ್ನೂ ಬಗೆಹರಿದಿಲ್ಲ. ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿರುವ ಸೀಮಿತ ಕಂದಾಯ ಭೂಮಿಯನ್ನು ಮತ್ತೊಂದು ಜಿಲ್ಲೆಯ ಯೋಜನೆಗಾಗಿ ಬಳಸುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಎದುರಾಗುತ್ತದೆ ಎಂದು ಅವರು ಹೇಳಿದ್ದಾರೆ.

ಜಿಲ್ಲೆಯ 1,513 ಅರಣ್ಯವಾಸಿಗಳ 1978ರ ಪೂರ್ವದ ಹಕ್ಕು ಸೇರಿದಂತೆ ಸಾವಿರಾರು ಹಂಗಾಮಿ ಸಾಗುವಳಿದಾರರಿಗೆ ಭೂಮಿ ಹಕ್ಕು ನೀಡಲು ಪರ್ಯಾಯ ಕಂದಾಯ ಭೂಮಿಯನ್ನು ಒದಗಿಸಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ. 84 ಸಾವಿರಕ್ಕೂ ಹೆಚ್ಚು ಅರಣ್ಯವಾಸಿಗಳು ಭೂಮಿ ಹಕ್ಕಿನಿಂದ ವಂಚಿತರಾಗಿರುವ ಸಂದರ್ಭದಲ್ಲಿ ಮೇಕೆದಾಟು ಯೋಜನೆಗೆ ಪರ್ಯಾಯವಾಗಿ ಜಿಲ್ಲೆಯ ಕಂದಾಯ ಭೂಮಿಯನ್ನು ನೀಡುವ ಚಿಂತನೆ ನಡೆಸುತ್ತಿರುವುದು ವಿಷಾದಕರ ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.

ಮೇಕೆದಾಟು ಯೋಜನೆಗೆ ಸುಮಾರು 12 ಸಾವಿರ ಎಕರೆ ಅರಣ್ಯ ಭೂಮಿ ನಾಶವಾಗಲಿದ್ದು, ಅದಕ್ಕೆ ಪರ್ಯಾಯವಾಗಿ ಅಷ್ಟೇ ಪ್ರಮಾಣದ ಕಂದಾಯ ಭೂಮಿಯನ್ನು ಅರಣ್ಯಕ್ಕೆ ವರ್ಗಾಯಿಸುವ ಅಗತ್ಯವಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 12.6 ಸಾವಿರ ಎಕರೆ ಕಂದಾಯ ಭೂಮಿಯನ್ನು ಪರ್ಯಾಯವಾಗಿ ನೀಡಲು ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಸುಮಾರು ₹9 ಸಾವಿರ ಕೋಟಿ ವೆಚ್ಚದ ಯೋಜನೆಯಿಂದ ಲಕ್ಷಾಂತರ ಮರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇದೆ ಎಂದು ಅವರು ಹೇಳಿದ್ದಾರೆ.

ಮೇಕೆದಾಟು ಯೋಜನೆಯ ಸಾಧಕ-ಬಾಧಕಗಳ ಕುರಿತು ಹೋರಾಟಗಾರರ ವೇದಿಕೆ ಚರ್ಚಿಸುತ್ತಿಲ್ಲ. ಆದರೆ, ಉತ್ತರ ಕನ್ನಡದ ಜನರಿಗೆ ತಮ್ಮದೇ ಬದುಕು ಕಟ್ಟಿಕೊಳ್ಳಲು ಭೂಮಿ ಇಲ್ಲದಿರುವ ಸಂದರ್ಭದಲ್ಲಿ ಹಾಗೂ ವರ್ಷಗಳಿಂದ ಭೂಮಿ ಹಕ್ಕಿಗಾಗಿ ಕಾಯುತ್ತಿರುವವರಿಗೆ ಪರ್ಯಾಯ ಭೂಮಿ ಒದಗಿಸಲು ಸರ್ಕಾರಕ್ಕೆ ಸಾಧ್ಯವಾಗದ ಸಂದರ್ಭದಲ್ಲಿ, ಜಿಲ್ಲೆಯ ಕಂದಾಯ ಭೂಮಿಯನ್ನು ಮತ್ತೊಂದು ಯೋಜನೆಗಾಗಿ ಬಳಸುವ ಪ್ರಯತ್ನ ಸಮಂಜಸವಲ್ಲ ಎಂದು ರವೀಂದ್ರ ನಾಯ್ಕ ಪ್ರತಿಕ್ರಿಯಿಸಿದ್ದಾರೆ.

ಜಿಲ್ಲಾಡಳಿತ ನೇರವಾಗಿ ತಿರಸ್ಕರಿಸಲಿ

ಬೇರೆ ಜಿಲ್ಲೆಯ ಯೋಜನೆಗೆ ಅರಣ್ಯ ಭೂಮಿಗೆ ಪರ್ಯಾಯವಾಗಿ ಉತ್ತರ ಕನ್ನಡ ಜಿಲ್ಲೆಯ ಕಂದಾಯ ಭೂಮಿಯನ್ನು ನೀಡುವ ಪ್ರಕ್ರಿಯೆಯನ್ನು ಜಿಲ್ಲಾಡಳಿತ ನೇರವಾಗಿ ತಿರಸ್ಕರಿಸಬೇಕು ಎಂದು ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.

ಮೊದಲು ಜಿಲ್ಲೆಯ ಅರಣ್ಯವಾಸಿಗಳು ಹಾಗೂ ಹಂಗಾಮಿ ಸಾಗುವಳಿದಾರರ ಭೂಮಿ ಹಕ್ಕಿನ ಸಮಸ್ಯೆಗೆ ಪರಿಹಾರ ಕಲ್ಪಿಸಿ, ನಂತರ ಉಳಿದ ಭೂಮಿಯ ಬಳಕೆಯ ಕುರಿತು ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!