ಯಲ್ಲಾಪುರ: ಪಟ್ಟಣದ ರವೀಂದ್ರನಗರ ನಿವಾಸಿ ಹಾಗೂ ಸ್ಥಳೀಯ ರಾಜಕೀಯ-ಸಾಮಾಜಿಕ ಕಾರ್ಯಕರ್ತ ಸೋಮೇಶ್ವರ ಮಹಾದೇವ ನಾಯ್ಕ ಅವರು ತಮ್ಮ ಹಾಗೂ ಕುಟುಂಬದವರ ಜೀವಕ್ಕೆ ಅಪಾಯವಿದೆ ಎಂದು ಆರೋಪಿಸಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಮನವಿ ಸಲ್ಲಿಸಿದ್ದಾರೆ.
ಕಳೆದ 23 ವರ್ಷಗಳಿಂದ ವಿವಿಧ ಸಾಮಾಜಿಕ ಹಾಗೂ ರಾಜಕೀಯ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವುದಾಗಿ ಉಲ್ಲೇಖಿಸಿರುವ ಅವರು, ಬಿಜೆಪಿಯ ವಿವಿಧ ಘಟಕಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿರುವುದರ ಜೊತೆಗೆ, 2018ರಲ್ಲಿ ಯಲ್ಲಾಪುರ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ವಾರ್ಡ್ ನಂ.17ರಿಂದ ಆಯ್ಕೆಯಾಗಿದ್ದು, ಸದಸ್ಯರಾಗಿ ಸೇವೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಪ್ರಸ್ತುತ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿದ್ದಾರೆ.
ಭೂಮಿ ಒತ್ತುವರಿ ತಡೆಯುವುದು, ಅಕ್ರಮ ಮರಳು ಸಾಗಾಟದ ಬಗ್ಗೆ ಮಾಹಿತಿ ನೀಡುವುದು, ಜೂಜು ಅಡ್ಡೆಗಳ ವಿರುದ್ಧ ಪೊಲೀಸರಿಗೆ ಮಾಹಿತಿ ಒದಗಿಸುವುದು ಹಾಗೂ ಗಾಂ*ಜಾ ಸೇವನೆ ಪ್ರಕರಣಗಳ ಬಗ್ಗೆ ಎಚ್ಚರಿಕೆ ನೀಡುವುದು ಸೇರಿದಂತೆ ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದಾಗಿ ಮನವಿಯಲ್ಲಿ ವಿವರಿಸಿದ್ದಾರೆ.
ಈ ಕಾರ್ಯಚಟುವಟಿಕೆಗಳಿಂದಾಗಿ ಕೆಲವು ವ್ಯಕ್ತಿಗಳ ಅಕ್ರಮ ಚಟುವಟಿಕೆಗಳಿಗೆ ಅಡ್ಡಿಯಾಗಿದ್ದು, ಅವರಿಂದ ದ್ವೇಷ ಬೆಳೆದು ತಮ್ಮ ವಿರುದ್ಧ ಸಂಚು ರೂಪಿಸಲಾಗುತ್ತಿದೆ. ದಿನಾಂಕ 26-02-2026ರಂದು ರಾತ್ರಿ ಸುಮಾರು 12.30 ಗಂಟೆಗೆ ಕೆಲ ಯುವಕರು ಬೈಕ್ಗಳಲ್ಲಿ ಬಂದು ತಮ್ಮ ಮನೆ ಗೇಟ್ಗೆ ಕಲ್ಲು ಎಸೆದು ಅಟ್ಟಹಾಸ ಮೆರೆದಿದ್ದಾರೆ. ಅದೇ ರೀತಿ 28-02-2026 ರಂದು ಮನೆಯ ಎದುರು ನಿಲ್ಲಿಸಿದ್ದ ದ್ವಿಚಕ್ರ ವಾಹನದ ಮೇಲೆ ಪಾನ್ ಉಗುಳಿರುವುದು ಕಂಡುಬಂದಿದೆ ಎಂದು ದೂರಿದ್ದಾರೆ.
ಈ ಘಟನೆಗಳನ್ನು ಗಮನಿಸಿದಾಗ ತಮ್ಮ ಹಾಗೂ ಕುಟುಂಬದ ಸದಸ್ಯರ ಜೀವಕ್ಕೆ ಅಪಾಯವಿರುವ ಸಾಧ್ಯತೆ ಇದ್ದು, ಪೊಲೀಸ್ ಇಲಾಖೆಯಿಂದ ಸೂಕ್ತ ರಕ್ಷಣೆ ಒದಗಿಸುವಂತೆ ಅವರು ವಿನಂತಿಸಿದ್ದಾರೆ.