ಯಲ್ಲಾಪುರ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಮಾವಿನಕಟ್ಟಾ ಕುಂದರಗಿ ನಿವಾಸಿ ಶೇಖರ ಮಾದೇವ ದೇವಾಡಿಗ (30) ಈ ಪ್ರಕರಣದ ಆರೋಪಿಯಾಗಿದ್ದು, ಅವನಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1,10,000 ರೂ ದಂಡ ವಿಧಿಸಲಾಗಿದೆ.
ಈ ತೀರ್ಪನ್ನು ಕಾರವಾರದ ತ್ವರಿತ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಪ್ರತಿಭಾ ಬಂಡುರಾವ್ ಕುಲಕರ್ಣಿ, ಆರೋಪಿಯ ವಿರುದ್ಧದ ಅಪರಾಧ ಸಾಕ್ಷಿ-ಪುರಾವೆಗಳ ಆಧಾರದಲ್ಲಿ ಸಾಬೀತಾಗಿದೆ ಎಂದು ತೀರ್ಮಾನಿಸಿ ಶಿಕ್ಷೆ ವಿಧಿಸಿದರು.
ಅಲ್ಲದೆ, ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ನೊಂದ ಬಾಲಕಿಗೆ 4 ಲಕ್ಷ ರೂ ಪರಿಹಾರ ನೀಡುವಂತೆ ಆದೇಶಿಸಲಾಗಿದೆ.
ಪ್ರಕರಣದ ತನಿಖೆಯನ್ನು ಸಿಪಿಐ ಸುರೇಶ್ ಎಚ್ ಯಳ್ಳೂರ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ದೋಷಾರೋಪಣ ಪತ್ರ ಸಲ್ಲಿಸಲಾಗಿತ್ತು.
ಸರ್ಕಾರ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಗುರುಶಾಂತಯ್ಯ ಕೆ.ಕುರ್ಡಿಕೇರಿ ವಾದ ಮಂಡಿಸಿ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾದರು. ತನಿಖೆಗೆ ಎಎಸ್ಐ ವಿಠಲ್ ಮಲವಾಡಕರ, ಸಿಪಿಐ ರಮೇಶ ಹನಾಪೂರ ಹಾಗೂ ಠಾಣೆಯ ಸಿಬ್ಬಂದಿಗಳು ಸಹಕರಿಸಿದ್ದಾರೆ.