ಕಾರವಾರ: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಮಧ್ಯರಾತ್ರಿ ಕಾರನ್ನು ಅಡ್ಡಗಟ್ಟಿ, ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಆರೋಪದಡಿ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಒಟ್ಟೂ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸದಾಶಿವಗಡದ ಚಿತ್ತಾಕುಲಾ ಕಾಲೋನಿಯ ನಿವಾಸಿ ಸಮೀರ್ ಕೆ. ಅತ್ತಾರ (26) ಅವರು ಏಪ್ರಿಲ್ 17ರ ರಾತ್ರಿ ಸುಮಾರು 12 ಗಂಟೆ ವೇಳೆಗೆ ಡ್ರೈವಿಂಗ್ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದರು. ಈ ವೇಳೆ ಕಾರವಾರ ತಾಲೂಕಿನ ಮಾಜಾಳಿ ಪೊಲೀಸ್ ಚೆಕ್ಪೋಸ್ಟ್ ಸಮೀಪ ಆರೋಪಿತರು ಎರಡು ಕಾರುಗಳಲ್ಲಿ ಬಂದು ಅವರ ವಾಹನವನ್ನು ಅಡ್ಡಗಟ್ಟಿದ್ದಾರೆ ಎನ್ನಲಾಗಿದೆ.
ದೂರಿನ ಪ್ರಕಾರ, ದರ್ಶನ ರಾಜೇಶ್ ಮಾಜಾಳಿಕರ, ಮೋಸಿನ್ ಖಾನ್, ಚೇತು ಹಾಗೂ ಇನ್ನೂ ಇಬ್ಬರು ಅನಾಮಿಕರು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಸಮೀರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, “ಇಂದು ನಿನ್ನನ್ನು ಕೊಲ್ಲುತ್ತೇವೆ… ಜೀವಂತ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿದ್ದಾರೆ.
ಸಮೀರ್ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಆರೋಪಿತರು ಸಫಾರಿ ಹಾಗೂ ಸ್ವಿಫ್ಟ್ ಕಾರುಗಳಲ್ಲಿ ಅವರ ವಾಹನವನ್ನು ಸುತ್ತುವರಿದು ತಡೆದಿದ್ದಾರೆ. ಬಳಿಕ ದರ್ಶನ ಮಾಜಾಳಿಕರ ತಮ್ಮೊಂದಿಗೆ ತಂದಿದ್ದ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದಲ್ಲದೆ, ಸಮೀರ್ ಅವರ ಮೂಗಿನ ಭಾಗಕ್ಕೆ ಗಂಭೀರ ಗಾಯಪಡಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಹಳೆಯ ದ್ವೇಷ ಮಧ್ಯರಾತ್ರಿಯಲ್ಲಿ ಮಾರಣಾಂತಿಕ ಹಲ್ಲೆಯಾಗಿ ಸ್ಫೋಟಗೊಂಡಿದೆ. ಆರೋಪಿಗಳ ಉದ್ದೇಶ ಕೊಲೆ ಯತ್ನವಾಗಿತ್ತೇ? ಎಂಬ ಪ್ರಶ್ನೆಗೆ ಈಗ ಪೊಲೀಸ್ ತನಿಖೆಯೇ ಉತ್ತರಿಸಬೇಕಿದೆ.