ಶಿರಸಿ: ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ವತಿಯಿಂದ ಬೇಡ್ತಿ-ವರದಾ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಏಪ್ರಿಲ್ 28ರಂದು ಬೆಳಗ್ಗೆ 10:30ಕ್ಕೆ ಯಲ್ಲಾಪುರ ಅರಣ್ಯ ಇಲಾಖೆ (ಡಿಎಫ್ಒ ಕಚೇರಿ) ಎದುರು ಮಹತ್ವದ ಸಭೆ ಮತ್ತು ಮನವಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕಾರ್ಯಕ್ರಮವು ಶ್ರೀ ಸೋಂದಾ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರ ಆದೇಶದಂತೆ ನಡೆಯುತ್ತಿದ್ದು, ಯೋಜನೆಗೆ ಅರಣ್ಯ ಇಲಾಖೆ ಸರ್ವೇಗೆ ಅವಕಾಶ ನೀಡಬಾರದು ಹಾಗೂ ರಾಜ್ಯ ಅರಣ್ಯ ಇಲಾಖೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಅರಣ್ಯ ಸಚಿವರಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗುತ್ತದೆ.
ಸಭೆಯಲ್ಲಿ ಬೇಡ್ತಿ-ಅಘನಾಶಿನಿ ಸಮಿತಿಯ ಪದಾಧಿಕಾರಿಗಳು, ಸಂಚಾಲಕರು, ಕಾರ್ಯಕರ್ತರು, ವಿವಿಧ ಸಹಕಾರಿ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ರಾಜಕೀಯ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ.ಶಿರಸಿಯಿಂದ ಸಮಿತಿಯ ಪ್ರಮುಖರಾದ ಅನಂತ ಹೆಗಡೆ, ವಿ.ಎನ್. ಹೆಗಡೆ ಬೊಮ್ಮನಳ್ಳಿ, ಬಾಲಚಂದ್ರ ಸಾಯಿಮನೆ, ಡಾ. ಕೇಶವ ಕೊರ್ಸೆ, ನಾರಾಯಣ ಗಡೀಕೈ ಸೇರಿದಂತೆ ಹಲವು ಮುಖಂಡರು ಆಗಮಿಸಲಿದ್ದಾರೆ.
ಗ್ರಾಮ, ಪಂಚಾಯತ್, VFC, BMC, ಸಹಕಾರಿ ಸಂಘಗಳು, ದೇವಾಸ್ಥಾನಗಳು, ಮಾತೃಮಂಡಳಿ ಹಾಗೂ ಇತರ ಸಂಸ್ಥೆಗಳ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮಿತಿ ಆಹ್ವಾನ ನೀಡಿದೆ.ಈ ಕುರಿತು ಸಮಿತಿಯ ಪ್ರಮುಖರಾದ ಶಾಂತಾರಾಂ ಸಿದ್ಧಿ, ನಾರಾಯಣ ಭಟ್ ಅಗ್ಗಾಶಿಕೊಂಬ್ರಿ, ಹರಿಪ್ರಕಾಶ ಕೋಣೆಮನೆ, ರಾಘವೇಂದ್ರ ಭಟ್, ಹಾಸಣಗಿ ಉಮೇಶ್ ಬಾಶ್ವತ, ರವಿ ಭಟ್ ವಡ್ರಮನೆ, ಐ.ಆರ್. ಹೆಗಡೆ, ಎಂ.ಕೆ. ಭಟ್, ಸುರ ಹಿತ್ತಳೆ, ಶ್ರೀಪಾದ ಶೀರನಾಲ್, ನರಸಿಂಹ ಸಾತೊಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ