ಜಬಲ್ಪುರ: ವೈದ್ಯನಾಗುವ ಕನಸಿಗಾಗಿ ಹೋರಾಟ ನಡೆಸಿದ 19 ವರ್ಷದ ಅಥರ್ವ ಚತುರ್ವೇದಿ ಎಂಬ ಯುವಕನ ಕಥೆ ಇದೀಗ ದೇಶದಾದ್ಯಂತ ಗಮನ ಸೆಳೆಯುತ್ತಿದೆ.
ಫೆಬ್ರವರಿ ತಿಂಗಳಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ನಡೆದ ವಿಚಾರಣೆಯಲ್ಲಿ, ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಪೀಠದ ಮುಂದೆ ಅಥರ್ವ ಸ್ವತಃ ತನ್ನ ಪ್ರಕರಣವನ್ನು ತಾವೇ ವಾದಿಸಿದರು. ಕೇವಲ 10 ನಿಮಿಷಗಳ ಮೌಖಿಕ ವಾದದ ನಂತರ ಪ್ರಕರಣದ ದಿಕ್ಕೇ ಬದಲಾಗಿದೆ.
ಸಂವಿಧಾನದ ವಿಧಿ 142ರಡಿಯಲ್ಲಿ ಲಭ್ಯವಿರುವ ವಿಶೇಷಾಧಿಕಾರವನ್ನು ಬಳಸಿಕೊಂಡು ಸುಪ್ರೀಂ ಕೋರ್ಟ್ ರಾಷ್ಟ್ರೀಯ ವೈದ್ಯಕೀಯ ಆಯೋಗ ಹಾಗೂ ಮಧ್ಯಪ್ರದೇಶ ಸರ್ಕಾರಕ್ಕೆ ಆರ್ಥಿಕವಾಗಿ ದುರ್ಬಲ ವರ್ಗ (EWS)ದ ನೀಟ್ ಅರ್ಹ ಅಭ್ಯರ್ಥಿಗಳಿಗೆ 2025-26ನೇ ಶೈಕ್ಷಣಿಕ ಸಾಲಿಗೆ ತಾತ್ಕಾಲಿಕ ಎಂಬಿಬಿಎಸ್ ಪ್ರವೇಶ ನೀಡುವಂತೆ ನಿರ್ದೇಶಿಸಿದೆ.
ಅಥರ್ವ ಎರಡು ಬಾರಿ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, 530 ಅಂಕಗಳನ್ನು ಗಳಿಸಿದ್ದರು. ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಎರಡೂ ಪ್ರವೇಶಗಳಿಗೆ ಅರ್ಹತೆ ಪಡೆದಿದ್ದರೂ, ಅವರು ವೈದ್ಯಕೀಯ ಶಿಕ್ಷಣವನ್ನೇ ಆರಿಸಿಕೊಂಡಿದ್ದರು. ಆದರೆ ಮಧ್ಯಪ್ರದೇಶದಲ್ಲಿ ಖಾಸಗಿ ಕಾಲೇಜುಗಳಲ್ಲಿ ಇಡಬ್ಲ್ಯೂಎಸ್ ಮೀಸಲಾತಿ ಜಾರಿಗೆ ಸಂಬಂಧಿಸಿದ ನೀತಿ ಸ್ಪಷ್ಟತೆ ಇಲ್ಲದ ಕಾರಣ ಅವರಿಗೆ ಸೀಟು ಲಭ್ಯವಾಗಿರಲಿಲ್ಲ.
ನ್ಯಾಯಾಲಯದ ನಿರ್ದೇಶನದಂತೆ, ವಿಧಿ 142ರ ಅಡಿಯಲ್ಲಿ ವಿಶೇಷಾಧಿಕಾರ ಬಳಸಿಕೊಂಡು, ಶುಲ್ಕ ಪಾವತಿಗೆ ಒಳಪಟ್ಟು 2025-26ನೇ ಸಾಲಿಗೆ ತಾತ್ಕಾಲಿಕ ಪ್ರವೇಶ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.