ಮುರ್ಡೇಶ್ವರ: ಎರಡು ಸ್ಕೂಟಿಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡಿರುವ ಘಟನೆ ಮುರ್ಡೇಶ್ವರ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಭಟ್ಕಳ ತಾಲೂಕಿನ ದೊಡ್ಡಬಲಸೆಯ ಮಹಾಬಲೇಶ್ವರ ಸೀತಾರಾಮ ನಾಯ್ಕ ಅವರು ನೀಡಿದ ದೂರಿನ ಆಧಾರದ ಮೇಲೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಮಹಾಬಲೇಶ್ವರ ಅವರ ಅಕ್ಕ ಮಹಾಲಕ್ಷ್ಮೀ (37) ಅವರು ಸೆ.15ರಂದು ಮಧ್ಯಾಹ್ನ ಸುಮಾರು 12.15ರ ವೇಳೆಗೆ ತಮ್ಮ ಸ್ಕೂಟಿ ಮೇಲೆ ಮಗಳನ್ನು ಹಿಂಬದಿ ಕೂರಿಸಿಕೊಂಡು ಮುರ್ಡೇಶ್ವರ ಕಡೆಯಿಂದ ನಾಕೆ ಕಡೆಗೆ ತೆರಳುತ್ತಿದ್ದರು. ಈ ವೇಳೆ ನಾಕೆ ಕಡೆಯಿಂದ ಮುರ್ಡೇಶ್ವರದತ್ತ ಬರುತ್ತಿದ್ದ ಸ್ಕೂಟಿ ಸವಾರ ಕುಮಾರ ಹಣಮಂತ ಮೊಗೇರ (48), ತನ್ನ ವಾಹನವನ್ನು ಅತಿವೇಗ ಹಾಗೂ ದುಡುಕಿನಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಡಿಕ್ಕಿ ಹೊಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಡಿಕ್ಕಿಯ ರಭಸಕ್ಕೆ ಎರಡೂ ಸ್ಕೂಟಿಗಳು ರಸ್ತೆಗೆ ಬಿದ್ದಿದ್ದು, ಮಹಾಲಕ್ಷ್ಮೀ ಅವರ ಬಾಯಿಯೊಳಗೆ ನೋವು ಕಾಣಿಸಿಕೊಂಡಿದ್ದು, ಗಲ್ಲದ ಭಾಗದಲ್ಲಿ ರಕ್ತಸ್ರಾವವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸ್ಕೂಟಿ ಸವಾರ ಕುಮಾರ ಹಣಮಂತ ಮೊಗೇರ ವಿರುದ್ಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.