ಯಲ್ಲಾಪುರ: ಪಟ್ಟಣದ ಬಸ್ ನಿಲ್ದಾಣ ಸರ್ಕಲ್ನಲ್ಲಿ ಗುರುವಾರ ನಡೆದ ರಸ್ತೆ ತಡೆ ಚಳುವಳಿಯ ವೇಳೆ ಸಹಕಾರಿ ಸಂಘಗಳ ಹಿರಿಯ ಅಧಿಕಾರಿಗಳು ಆಡಳಿತಾಧಿಕಾರಿಯನ್ನು ಸಂಜೆ ಒಳಗೆ ವಾಪಸ್ ಕರೆಸಿಕೊಳ್ಳುವ ಭರವಸೆಯನ್ನು ಸತ್ಯಾಗ್ರಹಿಗಳ ಎದುರು ನೀಡಿದ್ದರು.
ಆದರೆ ತಡರಾತ್ರಿಯವರೆಗೂ ಯಾವುದೇ ಅಧಿಕೃತ ಆದೇಶ ಹೊರಬಾರದ ಹಿನ್ನೆಲೆಯಲ್ಲಿ, ಈ ಮೊದಲು ಘೋಷಣೆ ಮಾಡಿದ್ದಂತೆ ಟಿಎಂಎಸ್ ಉಳಿಸಿ ಹೋರಾಟ ಸಮಿತಿ ಶುಕ್ರವಾರ ಬೆಳಿಗ್ಗೆಯಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದೆ.
ಸಮಿತಿಯ ಮುಖಂಡ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಅವರ ನೇತೃತ್ವದಲ್ಲಿ ಬೆಳಿಗ್ಗೆ 10.30ರಿಂದ ಉಪವಾಸ ಸತ್ಯಾಗ್ರಹ ಆರಂಭವಾಗಿದ್ದು, ಆಡಳಿತಾಧಿಕಾರಿಯನ್ನು ಹಿಂಪಡೆಯುವವರೆಗೆ ಹೋರಾಟ ಮುಂದುವರಿಸುವುದಾಗಿ ಹೋರಾಟಗಾರರು ಸ್ಪಷ್ಟಪಡಿಸಿದ್ದಾರೆ.
ಇದರ ನಡುವೆ, ಅಡಿಕೆ ವ್ಯಾಪಾರಸ್ಥರು ಸೇರಿದಂತೆ ಹಲವರು ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿಯವರ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದ್ದು, ಟಿಎಂಎಸ್ ಸೊಸೈಟಿಯ ಅಭಿವೃದ್ಧಿಗಾಗಿ ಅವರು ನೀಡುತ್ತಿರುವ ನಿಸ್ವಾರ್ಥ ಸೇವೆ ಮುಂದೆಯೂ ಸಂಸ್ಥೆಗೆ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿ, ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಪ್ರಮೋದ್ ಹೆಗಡೆ, ಹರಿಪ್ರಕಾಶ್ ಕೋಣೆಮನೆ, ವೆಂಕಟ್ರಮಣ ಬೆಳ್ಳಿ, ಡಿ.ಶಂಕರ ಭಟ್ಟ, ಗಣಪತಿ ಮಾನಿಗದ್ದೆ, ಸುಬ್ಬಣ್ಣ ಬೋಳ್ಮನೆ, ಅಪ್ಪು ಆಚಾರಿ, ಕೆ.ಟಿ. ಭಟ್ ಆನಗೋಡ್, ಪ್ರಸಾದ್ ಹೆಗಡೆ, ರಾಘು ಭಟ್ ಹಾಸಣಗಿ, ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಸೇರಿದಂತೆ ಹಲವರು ಸಾಥ್ ನೀಡಿದರು.