ಬೆಟ್ಟದಪುರ: ಗ್ರಾಮ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ಸೋಮವಾರ ಸಂಜೆ ಗುಡುಗು–ಸಿಡಿಲಿನೊಂದಿಗೆ ವರ್ಷದ ಮೊದಲ ಮಳೆಯಾಗಿದ್ದು, ಜನರಲ್ಲಿ ಸಂಭ್ರಮ ಮೂಡಿಸಿದೆ. ಈ ವೇಳೆ ಸಮೀಪದ ಅಲ್ಪ ನಾಯಕನಹಳ್ಳಿ ಗ್ರಾಮದ ನಿವಾಸಿ ಚಿಕ್ಕೇಗೌಡ ಎಂಬುವರಿಗೆ ಸೇರಿದ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡ ಪರಿಣಾಮ, ಸ್ಥಳೀಯರು ಕೆಲವು ಸಮಯ ಆತಂಕಗೊಂಡಿದ್ದರು.
ಸಂಜೆ ವೇಳೆಗೆ ಗುಡುಗು–ಸಿಡಿಲಿನ ಅಬ್ಬರದೊಂದಿಗೆ ಸಾಧಾರಣ ಮಳೆ ಸುರಿಯಿತು. ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಜನರು ಮಳೆಯಿಂದ ಸಂತಸ ವ್ಯಕ್ತಪಡಿಸಿದ್ದಾರೆ.
ಗುಡುಗು–ಸಿಡಿಲಿನ ಮಧ್ಯೆ ಏಕಾಏಕಿ ದೊಡ್ಡ ಸದ್ದು ಕೇಳಿಸಿತು. ಹೊರಗೆ ಬಂದು ನೋಡಿದಾಗ ತೆಂಗಿನ ಗಿಡಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡಿತ್ತು, ಅದೃಷ್ಟ ವಸಾದ್ ಸಿಡಿಲು ರಬ್ಬಸಕ್ಕೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಸ್ಥಳೀಯ ನಿವಾಸಿ ಮಹೇಶ್ ತಿಳಿಸಿದ್ದಾರೆ.
ಕೂರ್ಗಲ್ಲು, ಭುವನಹಳ್ಳಿ, ಬೆಟ್ಟದತುಂಗ, ಹರದೂರು ,ಮೇಗಲ ಕೊಪ್ಪಲು ಗ್ರಾಮಗಳಲ್ಲಿ ಮಳೆಯಾಗಿದೆ.