Saturday, May 30, 2026
HomeLocal Newsಬಿಜೆಪಿ ರೈತಮೋರ್ಚಾ ರೈತರ ಜೊತೆಗಿದೆ

ಬಿಜೆಪಿ ರೈತಮೋರ್ಚಾ ರೈತರ ಜೊತೆಗಿದೆ

ರಾಜ್ಯ ಸರ್ಕಾರ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ: ಅನಂತಮೂರ್ತಿ ಹೆಗಡೆ ಆರೋಪ

ಶಿರಸಿ: ಜಿಲ್ಲೆಯ ರೈತರು ಪ್ರಸ್ತುತ ಸಾಲಿನಲ್ಲಿ‌ ತೀವ್ರ ಸಂಕಷ್ಟದಲ್ಲಿದ್ದು, ಈ ಕೂಡಲೇ ಕ್ಷೇತ್ರದ ಶಾಸಕರು ತಮ್ಮ ನೇತೃತ್ವದಲ್ಲಿ ರೈತರು, ಸಹಕಾರಿ ಸಂಘಗಳ ಪ್ರಮುಖರು, ಕೃಷಿ ವಿಜ್ಞಾನಿಗಳು, ತೋಟಗಾರಿಕಾ ಹಾಗು ಕೃಷಿ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಕರೆದು ರೈತರ ಸಮಸ್ಯೆಗೆ ತುರ್ತು ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂದು ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಆಗ್ರಹಿಸಿದ್ದಾರೆ.

ಅವರು ಶಿರಸಿ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಎಲೆಚುಕ್ಕಿ ರೋಗದ ತೀವ್ರತೆಗೆ ಜಿಲ್ಲೆಯ ಜನ ಹೈರಾಣಾಗಿದ್ದು, ನಿತ್ಯದ ಬದುಕನ್ನು ಸಾಗಿಸುವುದು ಸಹ ಕಷ್ಟಕರವಾಗಿದೆ.

ಸಂಕಷ್ಟದಲ್ಲಿರುವ ರೈತರ ಪರವಾಗಿ ಬಿಜೆಪಿ ಸದಾ ನಿಲ್ಲಲಿದ್ದು, ಅದೇ ಕಾರಣಕ್ಕೆ ಮಳೆ ಮಾಪನ ಯಂತ್ರ ಸರಿಯಿಲ್ಲದಿದ್ದರೂ ಸಹ ಕಳೆದ ಅವಧಿಯಲ್ಲಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಪ್ರಯತ್ನದ ಫಲವಾಗಿ ರೈತರಿಗೆ ಬೆಳೆವಿಮೆ ಹಣ ದೊರಕಿಸಿಕೊಡಲಾಗಿತ್ತು.

ಈ ವರ್ಷವೂ ಸಹ ಸಂಸದರ ಪ್ರಯತ್ನದ ಫಲವಾಗಿ ಬೆಳೆವಿಮೆ ಹಣ ಜಮಾ ಆಗುತ್ತಿದೆ. ಕಳೆದ ವರ್ಷವೇ ಮಳೆ ಮಾಪನ ಯಂತ್ರವನ್ನು ಸರಿಪಡಿಸುವಂತೆ ಸಂಸದರು ತಾಕೀತು ಮಾಡಿದ್ದರೂ ಸಹ ರಾಜ್ಯ ಸರಕಾರದ ನಿಷ್ಕಾಳಜಿ ತೋರುವ ಮೂಲಕ ಜಿಲ್ಲೆಯ ರೈತರ ಬದುಕಿನಲ್ಲಿ ಚೆಲ್ಲಾಟ ಮಾಡುತ್ತಿದೆ ಎಂದು ಅವರು ಆಕ್ರೋಶ ಹೊರಹಾಕಿದರು.

ವಿಧಾನಸಭೆ ಅಧಿವೇಶನದಲ್ಲಿ ಶಿರಸಿ ಕ್ಷೇತ್ರದ ಶಾಸಕರು ಕೇವಲ ಕ್ಷೇತ್ರದ ಜನತೆಯೆದರು ಪ್ರಚಾರಕ್ಕಾಗಿ ಕಾಟಾಚಾರಕ್ಕೆ ಪ್ರಶ್ನೆ ಕೇಳಿ ಸುಮ್ಮನೆ ಕೂತಿದ್ದಾರೆ. ಎಲೆ ಚುಕ್ಕೆ ರೋಗಕ್ಕೆ ಔಷಧಿ ಸಹಾಯ ಧನ ಸರ್ಕಾರ 62 ಕೋಟಿ ರೂಪಾಯಿ ಮೀಸಲಿರಿಸಿದೆ ಎಂದು ಹೇಳಿಕೊಂಡಿದ್ದಾರೆ.

 ಆದರೆ, ಈವರೆಗೆ ಕೇವಲ 5.25 ಕೋಟಿ ರೂಪಾಯಿ ಮಾತ್ರ ಖರ್ಚಾಗಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಹಾಗಿದ್ದಲ್ಲಿ ಬಾಕಿ ಉಳಿದಿರುವ 56.75 ಕೋಟಿ ರೂಪಾಯಿ ಎಲ್ಲಿ ಹೋಯಿತು? ಸರ್ಕಾರದ ವರದಿಯ ಪ್ರಕಾರ ಕೇವಲ 16,000 ಜನರಿಗೆ ಮಾತ್ರ ಪರಿಹಾರ ನೀಡಲಾಗಿದೆ.

ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ 22,000ಕ್ಕೂ ಹೆಚ್ಚು ರೈತರು ಈ ರೋಗದಿಂದ ಸಂಕಷ್ಟಕ್ಕೀಡಾಗಿದ್ದಾರೆ. ಕೂಡಲೇ ತೋಟಗಾರಿಕೆ ಮಂತ್ರಿ ಜಿಲ್ಲೆಗೆ ಆಗಮಿಸಿ ಪರಿಸ್ಥಿತಿ ಅವಲೋಕನ ನಡೆಸಬೇಕು ಎಂದರು.

ಕೊಳೆರೋಗ ಮತ್ತು ಎಲೆಚುಕ್ಕಿ ರೋಗದ ಕಾರಣ ರೈತರು ಊಟ ಮಾಡುವುದೇ ಕಷ್ಟವಾಗಿದೆ. ನಮ್ಮ ಜಿಲ್ಲೆಯ ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ರೈತರ ಮಾಧ್ಯಮಿಕ ಸಾಲವನ್ನು ಮನ್ನಾ ಮಾಡಬೇಕು. ಜೊತೆಗೆ ಹಣ ತುಂಬುವ ಪ್ರಕ್ರಿಯೆ ತಡವಾದರೆ ರೈತರನ್ನು ಕಟ್ಟುಬಾಕಿ ಮಾಡದೆ ಸಮಯ ನೀಡಿ ಬೆಳೆ ಸಾಲ ಸಿಗುವಂತಾಗಬೇಕು.

ಯಾವುದೇ ರೈತನಿಗೆ ಸಮಸ್ಯೆ ಆದರೆ ಬಿಜೆಪಿ ರೈತಮೋರ್ಚಾ ಅವರ ಜೊತೆಗೆ ನಿಲ್ಲುವುದರ ಮೂಲಕ ಸಹಾಯಕ್ಕೆ ನಿಲ್ಲುತ್ತೇವೆ ಎಂದರು.

ಬಿಜೆಪಿ‌ ಶಿರಸಿ ತಾಲೂಕು ಅಧ್ಯಕ್ಷೆ ಉಷಾ ಹೆಗಡೆ ಮಾತನಾಡಿ, ಜಿಲ್ಲೆಯ ರೈತರು ಅನುಭವಿಸುತ್ತಿರುವ ಎಲೆಚುಕ್ಕಿ‌ರೋಗ, ಕೊಳೆ ರೋಗ ಸೇರಿದಂತೆ ಎಲ್ಲ ಸಮಸ್ಯೆಗಳ ಕುರಿತಾಗಿ ರೈತಮೋರ್ಚಾ ಕಳಕಳಿಯನ್ನು ಹೊಂದಿದ್ದು , ಹಂತ ಹಂತವಾಗಿ ಸಮಗ್ರ ಮಾಹಿತಿಯನ್ನು ಕಲೆ ಹಾಕುತ್ತಿದೆ. ಶಾಸಕರು ಸ್ಥಳೀಯ ರೈತರ ಸಮಸ್ಯೆಯನ್ನು ಸರಕಾರದ ಮಟ್ಟದಲ್ಲಿ ಚರ್ಚಿಸಿ, ಪರಿಹಾರ ದೊರಕಿಸಿಕೊಡಬೇಕಿದೆ ಎಂದರು.

ರೈತಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸುರೇಶ ನಾಯ್ಕ ಕಾನಗೋಡು ಮಾತನಾಡಿ, ರೈತರ ಸಮಸ್ಯೆಯನ್ನು ಕ್ಷೇತ್ರದ ಶಾಸಕರು ಮೊದಲ ಆದ್ಯತೆಯ ಮೇರೆಗೆ ಪರಿಹರಿಸಬೇಕು. ಇಲ್ಲವಾದಲ್ಲಿ ಬಿಜೆಪಿ ರೈತಮೋರ್ಚಾ ರಸ್ತೆಗಿಳಿದು ರೈತಪರ ಸಮಸ್ಯೆಗಳ ಕುರಿತು ಪ್ರತಿಭಟನೆ ನಡೆಸುತ್ತದೆ ಎಂದರು.

ರೈತಮೋರ್ಚಾ ಶಿರಸಿ ತಾಲೂಕು ಅಧ್ಯಕ್ಷ ಜಿ.ವಿ ಹೆಗಡೆ ಓಣಿಕೇರಿ ಮಾತನಾಡಿ, ಸಂಸದರ ಪ್ರಯತ್ನದ ಫಲವಾಗಿ ಕಳೆದ ವರ್ಷ ಹಾಗೂ ಈ ಬಾರಿ ಬೆಳೆವಿಮೆ ಜಮಾ ಆಗಿದೆ. ಈ ಕೂಡಲೇ ರಾಜ್ಯ ಸರಕಾರ ಮಳೆ ಮಾಪನ ಯಂತ್ರಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ರೈತಮೋರ್ಚಾ ಪ್ರಭಾರಿ ಪ್ರಶಾಂತ ನಾಯ್ಕ, ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಷ್ಣುಮೂರ್ತಿ ಹೆಗಡೆ, ರೈತಮೋರ್ಚಾ ಸಿದ್ದಾಪುರ ತಾಲೂಕು ಅಧ್ಯಕ್ಷ ನಾರಾಯಣ ಚಾರೆಕೋಣೆ, ಬಿಜೆಪಿ ಪ್ರಮುಖರಾದ ಡಾನಿ ಡಿಸೋಜಾ ಇದ್ದರು.

ಮನಬಂದಂತೆ ವರದಿ ಸಲ್ಲಿಕೆ

ರಾಜ್ಯ ಸರಕಾರದ ಅಧಿಕಾರಿಗಳು ಮನಸ್ಸಿಗೆ ಬಂದ ಹಾಗೆ ಮಳೆ ವರದಿ ಕೊಟ್ಟಿದ್ದಾರೆ. ಪಕ್ಕದ ಪಂಚಾಯತ್ ಬಂದಿರುವ ಮಳೆ ಪ್ರಮಾಣವನ್ನೇ ಆಧರಿಸಿ ವರದಿ ಕೊಟ್ಟಿದ್ದಾರೆ. ಒಂದೇ ಪ್ರಕಾರದ ಮಳೆ ಬಂದಿರುವ ಮತ್ತಿಘಟ್ಟಕ್ಕೆ ಗುಂಟೆಗೆ 170 ರೂ., ಬಂಡಲ ಪಂಚಾಯತ್ ನಲ್ಲಿ ಗುಂಟೆಗೆ 900. ರೂ ಪರಿಹಾರ ಬಂದಿದೆ.

ದೊಡ್ನಳ್ಳಿ ಪಂಚಾಯತ್ ನಲ್ಲಿ ಗುಂಟೆಗೆ 50 ರೂ. ಬಂದರೆ ಬಿಸಲಕೊಪ್ಪದಲ್ಲಿ 500 ರೂ ಬಂದಿದೆ. ಇದಕ್ಕೆ ಕಾಂಗ್ರೆಸ್ ಶಾಸಕರು ಮತ್ತು ಸಚಿವರು ನೈತಿಕ ಹೊಣೆ ಹೊರಬೇಕು. ಶಾಸಕರ ಹಾಗು ಸಚಿವರ ಅಸಡ್ಡೆಯ ಪರಿಣಾಮವಾಗಿ ಅಡಿಕೆ ಬೆಳೆಗಾರರು ಗೋಳಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಅನಂತಮೂರ್ತಿ ಹೆಗಡೆ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share