ಯಲ್ಲಾಪುರ: ಶ್ರೀ ಗೋಪಾಲಕೃಷ್ಣ ದೇವಸ್ಥಾನ ಆನಗೋಡ ಇದರ ಅಷ್ಟಬಂಧ ಮಹೋತ್ಸವವನ್ನು ಏ.8ರಿಂದ ಏ.11ರವರೆಗೆ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಹಮ್ಮಿಕೊಂಡಿದೆ ಎಂದು ದೇವಸ್ಥಾನದ ಮೊಕ್ತೇಸರ ಗಣಪತಿ ಮಾನಿಗದ್ದೆ ತಿಳಿಸಿದರು.
ಸುದರ್ಶನ ಸಭಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ವಿವರಣೆ ನೀಡಿದ ಅವರು, ದೆವಾಲಯದ ಕೆಲಸ ಒಂದು ಹಂತಕ್ಕೆ ಬಂದ ಈ ಸಂದರ್ಭದಲ್ಲಿ ಗ್ರಾಮಸ್ಥರು, ಭಕ್ತರ ಸಹಕಾರ ಪಡೆದು ಅಷ್ಟಬಂಧ ಮಹೋತ್ಸವ ಹಮ್ಮಿಕೊಂಡಿದೆ.
ಗೋಕರ್ಣ ಕ್ಷೇತ್ರದ ತಾಂತ್ರಿಕರಾದ ವಿ.ಗಣಪತಿ ಗಜಾನನ ಹಿರೇ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಏ.8 ರಂದು ಬ್ರಹ್ಮಕೂರ್ಚ ಹವನ, ಮಹಾಸಂಕಲ್ಪ ಒಳಗೊಂಡು ಯಾಗಶಾಲಾ ಪ್ರವೇಶ ಸೇರಿದಂತೆ ಉದಕಶಾಂತಿ, ವಾಸ್ತುಬಲಿ ಇತ್ಯಾದಿ ಕಾಯಕ್ರಮಗಳು ನಡೆಯಲಿವೆ. ಏ. 9ರಂದು ಬೆಳಿಗ್ಗೆ ಗಣಪತಿ ಪೂಜೆ, ಕಲಶ ಸ್ಥಾಪನೆ, ಗಣಪತ್ಯಥರ್ವಶೀರ್ಷ ಹವನ, ಪುರುಷ ಸೂಕ್ತ ಪಾರಾಯಣ, ಪೂರ್ವಾಂಗ ಹವನಗಳು ನಡೆಯಲಿವೆ.
ಏ.10 ರಂದು ಬೆಳಿಗ್ಗೆ 11.56ಕ್ಕೆ ದೇವರ ಪ್ರತಿಷ್ಠೆ, ಶಿಖರ ಪ್ರತಿಷ್ಠೆ, ಕಲಶಾಭಿಷೇಕ, ಕಲಾವೃದ್ಧಿ ಹವನ, ನಡೆಯಲಿದೆ. ಏ. 11ರಂದು ವಿವಿಧ ಹವನಗಳು,ಸಾಮೂಹಿಕ ಪ್ರಾರ್ಥನೆ, ಮಹಾಪ್ರಸಾದ, ಆಶೀರ್ಗ್ರಹಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಮಹೋತ್ಸವದ ಸಂದರ್ಭದಲ್ಲಿ ಸಂಗೀತಾರಾಧನೆ, ಭಜನೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಗಳನ್ನೂ ಆಯೋಜಿಸಲಾಗಿದೆ. ಏ. 11ರಂದು ಮಧ್ಯಾಹ್ನ 3.30ರಿಂದ ಅಷ್ಟಬಂಧ ಮಹೋತ್ಸವದ ಸಮಾರೋಪ ಸಮಾರಂಭ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಕ್ರಮ ಉಧ್ಘಾಟಿಸಲಿದ್ದಾರೆ.
ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮುಖ್ಯ ವಕ್ತಾರರಾಗಿ ಪಾಲ್ಗೊಳ್ಳುವರು. ಮೊಕ್ತೇಸರ ಗಣಪತಿ ಮಾನಿಗದ್ದೆ ಅಧ್ಯಕ್ಷತೆ ವಹಿಸುವರು. ಶಾಸಕ ಶಿವರಾಮ ಹೆಬ್ಬಾರ್, ಎಂ.ಎಲ್.ಸಿ ಶಾಂತಾರಾಮ ಸಿದ್ದಿ, ಮಾಜಿ ಶಾಸಕಿ ರೂಪಾಲಿ ನಾಯ್ಕ್, ವಿಶ್ವದರ್ಶನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ವಿ. ಗಣಪತಿ ರಾ.ಭಟ್ಟ ಲಿಂಗಭಟ್ರಮನೆ, ಸತೀಶ ಯಲ್ಲಾಪುರ, ಗಿರೀಶ ಭಟ್ಟ ಅಗ್ಗಾಶಿಮನೆ, ಗೋಪಾಲಕೃಷ್ಣ ಭಟ್ಟ-ಮಹಾದೇವಿ ಭಟ್ಟ ದಂಪತಿಗಳನ್ನು ಸನ್ಮಾನಿಸಲಾಗುವದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯದರ್ಶಿ ನರಸಿಂಹ ವಡಗಿರಿಪಾಲ್, ಪ್ರಮುಖರಾದ ಸತ್ಯನಾರಾಯಣ ನೆರ್ಲೆಮನೆ, ದಾಮೋದರ ವಡಗಿರಿಪಾಲ್, ನಾಗೇಂದ್ರ ಲಿಂಗಭಟ್ರಮನೆ, ಗಣಪತಿ ದೋಣಿಗದ್ದೆ, ಕೆ.ಎಸ್. ಭಟ್ಟ, ಶ್ರೀಕಾಂತ ಹೊನ್ನೆಬೈಲ್, ವಿಶ್ವೇಶ್ವರ ಗಾಂವ್ಕಾರ್ ಬೆಲ್ತರಗದ್ದೆ ಉಪಸ್ಥಿತರಿದ್ದರು.