ಯಲ್ಲಾಪುರ: ಸರಕಾರದಿಂದ ಬರುವ ಯೋಜನೆಗಳ ಸದುಪಯೋಗ ಪಡೆದುಕೊಂಡರೆ ಸಿದ್ದಿ ಸಮುದಾಯ ಇನ್ನಷ್ಟು ಬೆಳೆಯಬಹುದು. ಶಿಕ್ಷಣ ಪಡೆದು ಕಾನೂನಿನ ಅರಿವು ಪಡೆದುಕೊಂಡು ದಾಖಲಾತಿಗಳ ಮೂಲಕ ವ್ಯವಸ್ಥಿತ ಬದುಕು ಕಟ್ಟಿಕೊಂಡರೆ ಒಳ್ಳೆಯದು. ಈ ನಿಟ್ಟಿನಲ್ಲಿ ಸಮುದಾಯ ಎಚ್ಚರಿಕೆಯನ್ನು ವಹಿಸಬೇಕಾಗಿದೆ. ಎಂದು ನ್ಯಾಯವಾದಿ ಜಯರಾಮ ಸಿದ್ದಿ ಹೇಳಿದರು.
ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಹಾಗೂ ಸಿದ್ದಿ ಟ್ರಸ್ಟ್ ದೇವರಕಲ್ಲಳ್ಳಿ, ಮಂಚಿಕೇರಿ ಇವರ ಸಂಯುಕ್ತಾಶ್ರಯದಲ್ಲಿ ಮಂಚಿಕೇರಿಯ ದೇವರಕಲ್ಲಳ್ಳಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಉಧ್ಘಾಟಿಸಿ ಅವರು ಮಾತನಾಡಿದರು.
ರಂಗಭೂಮಿಯ ಮೂಲಕ ಒಂದು ವೇದಿಕೆಯನ್ನು ಇಲ್ಲಿ ಹಲವರು ಸೇರಿ ಸೃಷ್ಟಿ ಮಾಡಿಕೊಟ್ಟಿದ್ದಾರೆ. ಸಿದ್ದಿ ಸಮುದಾಯ ಕೂಡಾ ಅವರನ್ನು ಮರೆಯಬಾರದು ಎಂದರು.
ರಂಗಭೂಮಿ ಕಲಾವಿದ ಎಂ.ಕೆ. ಭಟ್ಟ ಯಡಳ್ಳಿ ಮಾತನಾಡಿದರು. ಶಿಕ್ಷಕ ನಾರಾಯಣ ಶೇರಗಾರ “ಶಾಲಾ ಶಿಕ್ಷಣದಲ್ಲಿ ರಂಗಭೂಮಿಯ ಪಾತ್ರ” ವಿಷಯದ ಕುರಿತು ಮಾತನಾಡಿದರು.
ವಾಸುಕಿ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ತಾಲೂಕಿನ ಪ್ರಸಿದ್ಧ ಕೀರ್ತನಾಕಾರ, ರಂಗ ನಟರೂ ಆಗಿರುವ ಭುಜಂಗ ಸಿದ್ದಿ, ಹಿರಿಯ ಜಾನಪದ ಹಾಗೂ ರಂಗ ನಟಿ ಕುಸುಮಾ ಸಿದ್ದಿ, ಪ್ರಸಿದ್ಧ ಚಿತ್ರ ಕಲಾವಿದರು ಹಾಗೂ ರಂಗ ನಟ ಸುಭಾಶ್ ಆಚಾರ್ ಹಾಗೂ ಸಿದ್ದಿ ಸಮುದಾಯದ ಮೃದಂಗ ವಾದಕ ಶಂಭು ಸಿದ್ದಿ ಇವರನ್ನು ಸನ್ಮಾನಿಸಲಾಯಿತು.
ಕಾಡು ಹಕ್ಕಿ ತಂಡದವರು ರಂಗ ಗೀತೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಶುರಾಮ ಗಿರಗೋಲಿ ಸಿದ್ದಿ, ಗಣಪತಿ ಹೆಗಡೆ, ಕೃಷ್ಣ ಸಿದ್ದಿ, ನಾಗ್ಯ ಸಿದ್ದಿ, ಸರಸ್ವತಿ ಸಿದ್ದಿ, ಟ್ರಸ್ಟಿನ ಸದಸ್ಯರು ಉಪಸ್ಥಿತರಿದ್ದರು.
ದಾಕ್ಷಾಯಣಿ ಸಿದ್ದಿ ಹಾಗೂ ದೀಪಾ ಸಿದ್ದಿ ಪ್ರಾರ್ಥಿಸಿದರು. ಗಿರೀಶ ಸಿದ್ದಿ ಸ್ವಾಗತಿಸಿದರು. ಉತ್ತರ ಕನ್ನಡ ಜಿಲ್ಲೆಯ ನಾಟಕ ಅಕಾಡೆಮಿ ಸದಸ್ಯರಾದ ಡಾ. ಗೀತಾ ಸಿದ್ದಿ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಲೋಕೇಶ್ ಸಿದ್ದಿ ನಿರೂಪಿಸಿದರು.