ಮುರ್ಡೇಶ್ವರ: ಮುರ್ಡೇಶ್ವರ ದೇವಸ್ಥಾನದಲ್ಲಿ ಭಕ್ತೆಯೊಬ್ಬರ ಬಂಗಾರದ ಸರ ಕಳ್ಳತನ ಮಾಡಿದ ಪ್ರಕರಣದಲ್ಲಿ ಅಂತರ ಜಿಲ್ಲಾ ಮಹಿಳಾ ಆರೋಪಿಯನ್ನು ಮುರ್ಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ನಿವಾಸಿ ಜೈಯಂತ್ ಎ.ವಿ. ವೇಣುಗೋಪಾಲ (42) ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಅವರ ತಾಯಿಯ ಸುಮಾರು 36 ಗ್ರಾಂ ತೂಕದ ಬಂಗಾರದ ಸರ ಕಳ್ಳತನವಾಗಿರುವ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಮುರ್ಡೇಶ್ವರ ಪೊಲೀಸ್ ಠಾಣೆಯ ಪಿಎಸ್ಐ ಲೋಕನಾಥ ರಾಥೋಡ ಹಾಗೂ ಸಿಬ್ಬಂದಿಗಳಾದ ವನಿತಾ ನಾಯ್ಕ, ಮಂಜುನಾಥ ಲಕ್ಕಾಪುರ, ವಿಜಯ ನಾಯ್ಕ ನೇತೃತ್ವದ ತಂಡ ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸಿತು.
ಈ ವೇಳೆ ಗದಗ ಜಿಲ್ಲೆಯ ಬೆಟಗೇರಿ ಗಾಂಧಿನಗರ ಸೆಟ್ಲಮೆಂಟ್ ನಿವಾಸಿ ಗಂಗಮ್ಮ (65) ಎಂಬ ಮಹಿಳೆಯನ್ನು ಏಪ್ರಿಲ್ 24ರಂದು ಮುರ್ಡೇಶ್ವರ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಯಿತು. ವಿಚಾರಣೆಯ ಬಳಿಕ ಆರೋಪಿತಳಿಂದ ಕಳ್ಳತನ ಮಾಡಲಾಗಿದ್ದ 27.600 ಗ್ರಾಂ ತೂಕದ, ಸುಮಾರು 3.28 ಲಕ್ಷ ರೂ ಮೌಲ್ಯದ ಎರಡು ಬಂಗಾರದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ., ಭಟ್ಕಳ ಉಪ ವಿಭಾಗದ ಡಿವೈಎಸ್ಪಿ ಗಿರೀಶ ಬಿ. ಹಾಗೂ ಮುರ್ಡೇಶ್ವರ ವೃತ್ತದ ಸಿಪಿಐ ಜಗದೀಶ ಹಂಚಿನಾಳ ಮಾರ್ಗದರ್ಶನದಲ್ಲಿ ನಡೆಯಿತು.
ತನಿಖಾಧಿಕಾರಿ ಹಣಮಂತ ಬಿರಾದಾರ ಹಾಗೂ ಪಿಎಸ್ಐ ಲೋಕನಾಥ ರಾಥೋಡ ನೇತೃತ್ವದಲ್ಲಿ ಸಿಬ್ಬಂದಿಗಳಾದ ವನಿತಾ ನಾಯ್ಕ, ಮಂಜುನಾಥ ಲಕ್ಕಾಪುರ, ಸಿದ್ದಪ್ಪ ಕಾಂಬಳೆ ಮತ್ತು ವಿಜಯ ನಾಯ್ಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.