ಶಿರಸಿ: ಅತೀವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸಿದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಇನ್ನೊಬ್ಬ ಬೈಕ್ ಸವಾರನಿಗೆ ಗಾಯಗಳಾದ ಘಟನೆ ತಾಲೂಕಿನ ಲಂಡಕನಳ್ಳಿ ಸಮೀಪದ ಜವಳಗುಂಡಿ ಕ್ರಾಸ್ ಬಳಿ ಶನಿವಾರ ಬೆಳಿಗ್ಗೆ ನಡೆದಿದೆ.
ಕಸ್ತೂರಬಾ ನಗರದ ನಿವಾಸಿ ಅನ್ವರಶಾ (40) ಗಾಯಗೊಂಡವರು. ಇವರು ತಮ್ಮ ಬೈಕ್ (ಕೆಎ-31/ಆರ್-6921)ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಎದುರು ದಿಕ್ಕಿನಿಂದ ಬಂದ ಇನ್ನೊಂದು ಬೈಕ್ ಸವಾರ ಅತೀವೇಗವಾಗಿ ಓವರ್ಟೇಕ್ ಮಾಡುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.
ಡಿಕ್ಕಿಯ ಪರಿಣಾಮ ಅನ್ವರಶಾ ಅವರ ಬಲ ಕಾಲಿನ ಪಾದಕ್ಕೆ ಗಾಯಗಳಾಗಿದ್ದು, ಅವರನ್ನು ಶಿರಸಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ನಂತರ ಆರೋಪಿಯು ತನ್ನ ಬೈಕ್ ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಸವಾರನ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.