ಯಲ್ಲಾಪುರ: ನಮ್ಮ ಪ್ರಾಚೀನ ವೇದ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾದರೆ ಇಂದಿನ ಮಕ್ಕಳಿಗೆ ವೇದಾಧ್ಯಯನ ಕಲಿಸುವುದು ಅತ್ಯಾವಶ್ಯಕ ಎಂದು ವೇ. ಗಣಪತಿ ಭಟ್ಟ ಅರಬೈಲ್ ಅಭಿಪ್ರಾಯಪಟ್ಟರು.
ತಾಲೂಕಿನ ಅರಬೈಲ್ ಶ್ರೀ ಮಾರುತಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಈ ವರ್ಷದ ಬೇಸಿಗೆ ರಜೆಯ ವೇದ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಶಿಬಿರವನ್ನು ನಡೆಸಲಾಗುತ್ತಿದ್ದು, ಉಪನಯನವಾದ ಸುತ್ತಮುತ್ತಲ ಹಾಗೂ ಹೊರಗಿನ ಅನೇಕ ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಿ ದೇವಪೂಜೆ, ರುದ್ರ, ಚಮಕ ಸೇರಿದಂತೆ ಪ್ರಾಥಮಿಕ ಹಂತದ ವೇದಾಭ್ಯಾಸವನ್ನು ಪಡೆದಿದ್ದಾರೆ ಎಂದರು.
ವೇದಾಭ್ಯಾಸದಿಂದ ಮಕ್ಕಳಲ್ಲಿ ಸಂಸ್ಕಾರ ಬೆಳೆದು ಬರುತ್ತದೆ. ಕುಟುಂಬದಲ್ಲಿ ಒಬ್ಬರಾದರೂ ವೇದವನ್ನು ಅಧ್ಯಯನ ಮಾಡಿದರೆ ಆ ಕುಟುಂಬ ಸಮೃದ್ಧಿಯಾಗುತ್ತದೆ ಎಂದು ಹೇಳಿದರು.
ವೇ. ಗಜಾನನ ಭಟ್ಟ ಮಾತನಾಡಿ, ಇಂತಹ ಶಿಬಿರಗಳ ಮೂಲಕ ಮಕ್ಕಳು ಉತ್ತಮ ಮೌಲ್ಯಗಳನ್ನು ಕಲಿಯುತ್ತಾರೆ. ಮನೆಯಲ್ಲಿ ನಿತ್ಯವೂ ವೇದಪಠಣ ನಡೆಯುವಂತಾಗಬೇಕು ಎಂದು ಆಶಿಸಿದರಲ್ಲದೆ, ರಜಾ ಕಾಲವನ್ನು ಸದುಪಯೋಗಪಡಿಸಿಕೊಂಡ ವಿದ್ಯಾರ್ಥಿಗಳನ್ನು ಅವರು ಶ್ಲಾಘಿಸಿದರು.
ಶಿಬಿರದ ಶಿಕ್ಷಕರಾದ ಚಿನ್ಮಯ ಭಟ್ಟ ಅವರನ್ನು ವಿದ್ಯಾರ್ಥಿಗಳು ಮತ್ತು ಪಾಲಕರು ಗೌರವಿಸಿದರು. ಗಣಪತಿ ಭಟ್ಟ ಸ್ವಾಗತಿಸಿ ವಂದಿಸಿದರು.