ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳ ಮಮತಾ ಬ್ಯಾನರ್ಜಿ ಆಡಳಿತ ಅಂತ್ಯಗೊಳ್ಳುವ ಸೂಚನೆಗಳ ನಡುವೆ ಭಾರತೀಯ ಜನತಾ ಪಕ್ಷ ಸ್ಪಷ್ಟ ಮುನ್ನಡೆಯೊಂದಿಗೆ ಅಧಿಕಾರದ ಅಂಚಿಗೆ ತಲುಪಿದೆ.
293 ಸದಸ್ಯರ ವಿಧಾನಸಭೆಯಲ್ಲಿ ಬಹುಮತಕ್ಕೆ ಬೇಕಾದ 190+ ಸ್ಥಾನಗಳಿಗಿಂತ ಬಹಳ ಮುಂದೆ ಹೋಗಿದೆ. ಈ ಹಿನ್ನೆಲೆ, ಸರ್ಕಾರ ರಚನೆ ಬಹುತೇಕ ಖಚಿತ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಈ ರಾಜಕೀಯ ಬದಲಾವಣೆಯ ಮಧ್ಯೆ ಇದೀಗ ಬಿಜೆಪಿಯೊಳಗೆಲೇ ಸಿಎಂ ಕುರ್ಚಿಗಾಗಿ ಗಟ್ಟಿಯಾದ ಪೈಪೋಟಿ ಶುರುವಾಗಿದೆ.
ಈ ಪೈಪೋಟಿಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವವರು ಸುವೇಂದು ಅಧಿಕಾರಿ. ಮಮತಾ ಬ್ಯಾನರ್ಜಿ ಸರ್ಕಾರದಿಂದ ಹೊರಬಂದು ಬಿಜೆಪಿಗೆ ಸೇರ್ಪಡೆಯಾದ ಬಳಿಕ, ಬಂಗಾಳದಲ್ಲಿ ಪಕ್ಷವನ್ನು ಬಲಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ನಂದಿಗ್ರಾಮ್ನಂತಹ ರಾಜಕೀಯವಾಗಿ ಸಂಕೇತಾತ್ಮಕ ಕ್ಷೇತ್ರದಲ್ಲಿ ಮಮತಾ ವಿರುದ್ಧ ನೇರ ಹೋರಾಟ ನಡೆಸಿದ ಅವರು ‘ಮಾಸ್ ಲೀಡರ್’ ಆಗಿ ಹೊರಹೊಮ್ಮಿದ್ದಾರೆ.
ಇನ್ನೊಂದೆಡೆ, ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ ‘ಸಂಘಟನಾ ಮುಖ’ವಾಗಿ ಗುರುತಿಸಿಕೊಂಡಿದ್ದಾರೆ. ಆರ್ಎಸ್ಎಸ್ ಹಿನ್ನೆಲೆ ಹೊಂದಿರುವ ಅವರು ವಿವಿಧ ಸಮುದಾಯಗಳಲ್ಲಿ ಪಕ್ಷದ ವಿಸ್ತರಣೆಗಾಗಿ ಕೆಲಸ ಮಾಡಿದ್ದು, ಪಕ್ಷದ ಒಳಗಿನ ಸಮತೋಲನ ಕಾಯ್ದುಕೊಳ್ಳುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ.
ಅದೇ ವೇಳೆ, ಮಾಜಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ತಳಮಟ್ಟದ ಕಾರ್ಯಕರ್ತರನ್ನು ಸಂಘಟಿಸುವ ಮೂಲಕ ಬಿಜೆಪಿಗೆ ಬಲ ನೀಡಿದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. 2019ರ ಲೋಕಸಭೆ ಹಾಗೂ 2021ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸಾಧನೆಗೆ ಅವರ ಕೊಡುಗೆ ಗಮನಾರ್ಹವಾಗಿದ್ದು, ‘ತಳಮಟ್ಟದ ಲೀಡರ್’ ಎಂಬ ಗುರುತಿನೊಂದಿಗೆ ಅವರು ಕೂಡ ರೇಸ್ನಲ್ಲಿ ಉಳಿದಿದ್ದಾರೆ.
ಅಂತಿಮ ನಿರ್ಧಾರದಲ್ಲಿ ಪ್ರಾದೇಶಿಕ ಸಮತೋಲನ, ಜಾತಿ-ಸಾಮಾಜಿಕ ಅಂಶಗಳು ಹಾಗೂ ಸಂಘಟನಾ ರಾಜಕೀಯ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ, ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿರುವುದು ದೊಡ್ಡ ರಾಜಕೀಯ ತಿರುವು.