ಕುಮಟಾ: ಭೂ ಅಕ್ರಮ ಆರೋಪಗಳ ಹಿನ್ನೆಲೆಯಲ್ಲಿ ಸುದ್ದಿಯಲ್ಲಿದ್ದ ಕುಮಟಾ ಬಿಜೆಪಿ ಮಂಡಳ ಅಧ್ಯಕ್ಷ ಜಿ.ಐ. ಹೆಗಡೆ ಅವರು ತಮ್ಮ ವಿರುದ್ಧ ಕೇಳಿಬಂದ ಆರೋಪಗಳನ್ನು ತಳ್ಳಿಹಾಕಿ ಸ್ಪಷ್ಟನೆ ನೀಡಿದ್ದಾರೆ.
ಈಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದನ್ನು ಸಹಿಸದ ಕೆಲವರು ಅನಗತ್ಯವಾಗಿ ದೂರು ನೀಡಿದ್ದಾರೆ. ಆ ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ.
ಅದೇ ಭೂಮಿ ವಿಷಯವಾಗಿ ಬುಧವಾರ ಅವರು ಸಂಬಂಧಿತ ದಾಖಲೆಗಳನ್ನು ಬಿಡುಗಡೆ ಮಾಡಿದ್ದು, “ಆ ಭೂಮಿ ಅರಣ್ಯ ಇಲಾಖೆ ಆಸ್ತಿಯೇ ಅಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಮೂರೂರು ಗ್ರಾಮದ ಸರ್ವೆ ನಂ. 191/1A ಪ್ರದೇಶದಲ್ಲಿ ದತ್ತಾತ್ರೇಯ ಭಟ್ಟ ಅವರು 3 ಎಕರೆ ಭೂಮಿಯನ್ನು ಖರೀದಿಸಿರುವುದಾಗಿ ತಿಳಿಸಿದ ಅವರು, “ಆ ಭೂಮಿಗೆ ಕಾಂಪೌಂಡ್ ಹಾಕಲು ಕೆಲವರು ಅಡ್ಡಿಪಡಿಸುತ್ತಿದ್ದರು. ಸಹಾಯಕ್ಕಾಗಿ ಬಂದ ದತ್ತಾತ್ರೇಯ ಭಟ್ಟ ಅವರ ದಾಖಲೆಗಳನ್ನು ಪರಿಶೀಲಿಸಿ ನಾನು ನೆರವು ನೀಡಿದ್ದೇನೆ. ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವುದು ನಮ್ಮ ಕರ್ತವ್ಯ” ಎಂದು ಹೇಳಿದ್ದಾರೆ.
3 ಎಕರೆ ಸರಕಾರಿ ಅರಣ್ಯ ಭೂಮಿಯನ್ನು ರಾಜಕೀಯ ಪ್ರಭಾವ ಬಳಸಿ ಒತ್ತುವರಿ ಮಾಡಲು ಯತ್ನಿಸಲಾಗಿದೆ ಎಂಬ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.
ಈ ಕುರಿತು ಮಾತನಾಡಿದ ದತ್ತಾತ್ರೇಯ ಭಟ್ಟ, ಮೂರೂರು ಗ್ರಾಮದ ಸರ್ವೆ ನಂ. 191ಕ್ಕೆ ಸಂಬಂಧಿಸಿದ 175 ಎಕರೆ ಅರಣ್ಯ ಪ್ರದೇಶದಲ್ಲಿ 3 ಎಕರೆ ಜಾಗವನ್ನು 1995-96ರಲ್ಲಿ ಜಿಲ್ಲಾಧಿಕಾರಿಗಳು ಶ್ರೀಧರ ಮಹಾಬಲೇಶ್ವರ ಹೆಗಡೆ ಅವರಿಗೆ ಮಂಜೂರು ಮಾಡಿದ್ದರು. ಬಳಿಕ 2014ರಲ್ಲಿ ನಾನು ಹಾಗೂ ಮಂಜುನಾಥ ವೆಂಕಟ್ರಮಣ ಹೆಗಡೆ ಜಂಟಿಯಾಗಿ ಈ ಜಾಗವನ್ನು ಖರೀದಿಸಿದ್ದೇವೆ. ಅರಣ್ಯ ಮತ್ತು ಸರ್ವೇ ಇಲಾಖೆಯಿಂದ ಜಂಟಿ ಸರ್ವೇ ನಡೆಸಿ ಗಡಿ ಗುರುತು ಹಾಕಲಾಗಿದೆ ಎಂದು ವಿವರಿಸಿದರು.
ನಾವು ಖರೀದಿಸಿದ ಜಾಗದಲ್ಲಿ ಜಟಕ ದೇವರಿಲ್ಲ. ಜಟಕ ದೇವರು ನಮ್ಮ ಜಾಗದಿಂದ ದೂರದಲ್ಲಿದ್ದು, ಕಪೌಂಡ್ ನಿರ್ಮಿಸಲು ಮುಂದಾದಾಗ ವಿರೋಧ ಎದುರಾಗುತ್ತಿದೆ. ಈ ಸಮಸ್ಯೆ ಪರಿಹರಿಸಲು ನಾವು ಜಿ.ಐ. ಹೆಗಡೆ ಅವರನ್ನು ಸಂಪರ್ಕಿಸಿದ್ದೇವೆ. ಆದರೆ ಇದೀಗ ಅವರ ವಿರುದ್ಧ ಅನಗತ್ಯ ಆರೋಪಗಳು ಕೇಳಿಬರುತ್ತಿರುವುದು ವಿಷಾದನೀಯ ಎಂದು ದೂರಿದರು.
ಈ ವೇಳೆ ಶ್ರೀಧರ ಮಹಾಬಲೇಶ್ವರ ಹೆಗಡೆ, ಕೃಷ್ಣಮೂರ್ತಿ ಹೆಗಡೆ ಹಾಗೂ ಮಂಜುನಾಥ ವೆಂಕಟ್ರಮಣ ಹೆಗಡೆ ಉಪಸ್ಥಿತರಿದ್ದು, “ಜಿ.ಐ. ಹೆಗಡೆ ಅವರದ್ದು ಯಾವುದೇ ತಪ್ಪಿಲ್ಲ” ಎಂದು ಬೆಂಬಲ ವ್ಯಕ್ತಪಡಿಸಿದರು.