ಜಿಲ್ಲೆಯಲ್ಲಿ ಮುಂದುವರೆದ ಸೈಬರ್ ವಂಚನೆ
ಕುಮಟಾ: ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಸಿಗುತ್ತದೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಂದ 9.34 ಲಕ್ಷ ರೂ ಹಣ ಪಡೆದು ವಂಚಿಸಿರುವ ಘಟನೆ ಕುಮಟಾದಲ್ಲಿ ನಡೆದಿದೆ.
ಕುಮಟಾ ನಿವಾಸಿ ಗಣೇಶ ಶೇಟ್ (43) ವಂಚನೆಗೆ ಒಳಗಾದವರು. ಕಳೆದ 2025ರ ಅಕ್ಟೋಬರ್ ತಿಂಗಳ ಎರಡನೇ ವಾರದಿಂದ ಫೇಸ್ಬುಕ್ ಮೆಸೇಂಜರ್ ಮೂಲಕ ಆರೋಪಿತರು ಟ್ರೇಡಿಂಗ್ ಇನ್ವೆಸ್ಟ್ಮೆಂಟ್ ಕುರಿತು ಸಂದೇಶ ಕಳುಹಿಸಿ, ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿದ್ದರು.
ನಂತರ ಆರೋಪಿತರು ಕಳುಹಿಸಿದ್ದ ವಾಟ್ಸಪ್ ಗ್ರೂಪ್ ಲಿಂಕ್ ಮೂಲಕ “Intelligence 04” ಎಂಬ ಹೆಸರಿನ ಗ್ರೂಪ್ಗೆ ಗಣೇಶ ಶೇಟ್ ಸೇರಿದ್ದರು. ಸುಮಾರು ಒಂದು ತಿಂಗಳ ಕಾಲ ಗ್ರೂಪ್ನಲ್ಲಿದ್ದ ಇತರರು ಲಾಭ ಗಳಿಸುತ್ತಿರುವಂತೆ ತೋರಿಸಲಾಗಿದ್ದು, ಬಳಿಕ ಆರೋಪಿತರು ವೈಯಕ್ತಿಕವಾಗಿ ಸಂಪರ್ಕಿಸಿ ಟ್ರೇಡಿಂಗ್ನಲ್ಲಿ ಹಣ ಹೂಡಲು ಪ್ರೇರೇಪಿಸಿದ್ದರು.
ಅಲ್ಲದೇ, ವಾಟ್ಸಪ್ ಮೂಲಕ ಕಳುಹಿಸಿದ ಲಿಂಕ್ ಮೂಲಕ ಅಪ್ಲಿಕೇಶನ್ ಡೌನ್ಲೋಡ್ ಮಾಡಿಸಿಕೊಂಡು, ಅದರಲ್ಲಿ ವೈಯಕ್ತಿಕ ಮಾಹಿತಿ ದಾಖಲಿಸುವಂತೆ ಸೂಚಿಸಿದ್ದರು. ಆರೋಪಿತರ ಸೂಚನೆಯಂತೆ ವಿವಿಧ ಬ್ಯಾಂಕ್ ಖಾತೆಗಳು ಹಾಗೂ ಯುಪಿಐ ಐಡಿಗಳಿಗೆ ಹಂತ ಹಂತವಾಗಿ ಒಟ್ಟು 9,34,413 ರೂ ಹಣ ವರ್ಗಾವಣೆ ಮಾಡಲಾಗಿದೆ. ನಂತರ ಮೂಲ ಹೂಡಿಕೆಯ ಹಣವೂ ಇಲ್ಲದೆ, ಲಾಭವೂ ಇಲ್ಲದೆ ಮೋಸವಾಗಿರುವುದು ಅರಿವಿಗೆ ಬಂದಿದೆ.
ಹಣ ಮರಳಿಸದೇ ವಂಚನೆ ಎಸಗಿರುವ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಸಾರ್ವಜನಿಕರಲ್ಲಿ ಕೆನರಾ ನೆಕ್ಸ್ಟ್ ಮನವಿ
ಸಾಮಾಜಿಕ ಜಾಲತಾಣಗಳು, ವಾಟ್ಸಪ್ ಗ್ರೂಪ್ಗಳು ಹಾಗೂ ಅಪರಿಚಿತ ಲಿಂಕ್ಗಳ ಮೂಲಕ “ಹಣ ಡಬಲ್”, “ತಕ್ಷಣ ಲಾಭ”, “ಗ್ಯಾರಂಟಿ ರಿಟರ್ನ್” ಎಂಬ ಆಮಿಷಗಳಿಗೆ ಸಾರ್ವಜನಿಕರು ಮರುಳಾಗಬಾರದು. ಯಾವುದೇ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಮುನ್ನ ಅದರ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಬೇಕು. ಅಪರಿಚಿತ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡುವ ಮೊದಲು ಜಾಗ್ರತೆ ವಹಿಸಿ, ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಸೈಬರ್ ಕ್ರೈಂ ಸಹಾಯವಾಣಿ 1930ಕ್ಕೆ ಸಂಪರ್ಕಿಸಿ.