ದಾಂಡೇಲಿ: ನಗರದ ವಿಟಿಯು ಕಾಲೇಜಿನ ಮೈದಾನದ ಗಟಾರಿನಲ್ಲಿ ಸುಮಾರು 15 ಅಡಿ ಉದ್ದದ ಬೃಹತ್ ಹೆಬ್ಬಾವು ಕಾಣಿಸಿಕೊಂಡ ಪರಿಣಾಮ ವಿದ್ಯಾರ್ಥಿಗಳು ಹಾಗೂ ಸ್ಥಳೀಯರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ಗಟಾರಿನಲ್ಲಿ ಓಡಾಡುತ್ತಿದ್ದ ಹೆಬ್ಬಾವನ್ನು ಗಮನಿಸಿದ ವಿದ್ಯಾರ್ಥಿಗಳು ತಕ್ಷಣ ಶಿಕ್ಷಕರಿಗೆ ಮಾಹಿತಿ ನೀಡಿದ್ದು, ಬಳಿಕ ಅರಣ್ಯ ಇಲಾಖೆಗೆ ವಿಷಯ ತಿಳಿಸಲಾಯಿತು. ಸ್ಥಳಕ್ಕೆ ಉರಗ ತಜ್ಞ ರಾಜಾಕ್ ಶಾ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
ಶ್ರಮಪಟ್ಟು ಹೆಬ್ಬಾವನ್ನು ಹಿಡಿಯುವ ಕಾರ್ಯಾಚರಣೆ ನಡೆಸುವ ವೇಳೆ ಉರಗ ತಜ್ಞ ರಜಾಕ್ ಶಾ ಅವರಿಗೆ ಅಪಾಯದ ಪರಿಸ್ಥಿತಿ ಎದುರಾಗಿದ್ದು, ಅದೃಷ್ಟವಶಾತ್ ಪಾರಾದ ಘಟನೆ ನಡೆದಿದೆ. ಆದರೂ ಧೈರ್ಯ ಕಳೆದುಕೊಳ್ಳದೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಹಕಾರದೊಂದಿಗೆ ಯಶಸ್ವಿಯಾಗಿ ಹೆಬ್ಬಾವನ್ನು ಸೆರೆಹಿಡಿಯಲಾಯಿತು.
ಬಳಿಕ ಹೆಬ್ಬಾವನ್ನು ಸುರಕ್ಷಿತವಾಗಿ ಸಮೀಪದ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.
ಜನರ ಜೀವ ರಕ್ಷಣೆಗೆ ಸದಾ ಮುಂದಾಗುವ ಉರಗ ತಜ್ಞ ರಜಾಕ್ ಶಾ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.