ಜೊಯಿಡಾ: ತಾನು ಅಬಕಾರಿ ಇಲಾಖೆ ಅಧಿಕಾರಿ ಎಂದು ಪರಿಚಯಿಸಿಕೊಂಡು ಹೊಟೇಲ್ಗಳಲ್ಲಿ ತಪಾಸಣೆ ನಡೆಸಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಬ್ದುಲ್ ರಫೀಕ್ ಎಂಬಾತ ಮೇ 10ರಂದು ಜೊಯಿಡಾದ ಅಪ್ಪು ಹೊಟೇಲ್ ಬಳಿ ಬಂದು, “ನಾನು ದಾಂಡೇಲಿ ಅಬಕಾರಿ ಇಲಾಖೆ ಅಧಿಕಾರಿ” ಎಂದು ಪರಿಚಯಿಸಿಕೊಂಡಿದ್ದಾನೆ ಎನ್ನಲಾಗಿದೆ. ಬಳಿಕ ಹೊಟೇಲ್ನಲ್ಲಿ ಅಕ್ರಮ ಸರಾಯಿ ಮಾರಾಟ ನಡೆಯುತ್ತಿದೆ ಎಂದು ಹೇಳಿ ತಪಾಸಣೆ ನಡೆಸಲು ಮುಂದಾಗಿದ್ದಾನೆ.
ಹೊಟೇಲ್ ಮಾಲೀಕ ವಿಶ್ವನಾಥ ತುಳಿಯೋ ಗಾವಡಾ ಅವರು ತಪಾಸಣೆಗೆ ಅವಕಾಶ ನೀಡಿದ್ದು, ಈ ವೇಳೆ ಹೊಟೇಲ್ನಲ್ಲಿದ್ದ ಸಾಮಗ್ರಿಗಳನ್ನು ಚಲ್ಲಾಪಿಲ್ಲಿಯಾಗಿಸಿ ಪರಿಶೀಲನೆ ನಡೆಸಲಾಗಿದೆ. ಆದರೆ ಯಾವುದೇ ಅಕ್ರಮ ವಸ್ತು ಪತ್ತೆಯಾಗದೇ ಇದ್ದ ಕಾರಣ ನಕಲಿ ಅಧಿಕಾರಿ ಅಲ್ಲಿಂದ ತೆರಳಿದ್ದಾನೆ.
ಈ ಘಟನೆ ಬಳಿಕ ಅಬ್ದುಲ್ ರಫೀಕ್ನ ನಡೆಯ ಬಗ್ಗೆ ಅನುಮಾನಗೊಂಡ ಸ್ಥಳೀಯರು ವಿಚಾರಣೆ ನಡೆಸಿದಾಗ, ಹೊಟೇಲ್ ಪಕ್ಕದ ಗ್ಯಾರೇಜ್ ಹಾಗೂ ಇನ್ನಿತರ ಅಂಗಡಿಗಳಲ್ಲಿಯೂ ಇದೇ ರೀತಿ ತಪಾಸಣೆ ನಡೆಸಿರುವುದು ಬೆಳಕಿಗೆ ಬಂದಿದೆ.
ಜನರು ಪ್ರಶ್ನೆ ಕೇಳಲು ಆರಂಭಿಸಿದ ತಕ್ಷಣ ಅಬ್ದುಲ್ ರಫೀಕ್ ಸ್ಕೂಟಿಯಲ್ಲಿ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.