ಶಿರಸಿ: ನಡೆದಾಡುವ ದಾರಿಗೆ ಬೇಲಿ ನಿರ್ಮಾಣ ವಿಚಾರವಾಗಿ ಉಂಟಾದ ಕುಟುಂಬ ಕಲಹ ಹಲ್ಲೆಗೆ ತಿರುಗಿದ್ದು, ಮಹಿಳೆಯೊಬ್ಬರ ಮೇಲೆ ಅಣ್ಣ ಹಾಗೂ ಅತ್ತಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಸಗೆ ಮೂಲದ, ಪ್ರಸ್ತುತ ದೇವನಳ್ಳಿಯ ಶಿರ್ಲೆಬೈಲ್ನಲ್ಲಿ ವಾಸವಿರುವ ಲೀಲಾವತಿ ಮಂಜುನಾಥ ಗೌಡ (33) ನೀಡಿದ ದೂರಿನ ಮೇರೆಗೆ ವೆಂಕಟು ಗಣಪತಿ ಗೌಡ ಹಾಗೂ ದೇವಕಿ ವೆಂಕಟು ಗೌಡ ವಿರುದ್ಧ ಪ್ರಕರಣ ದಾಖಲಾಗಿದೆ.
ಮನೆ ಹಾಗೂ ಜಾಗದ ವಿಚಾರವಾಗಿ ಆರೋಪಿತರು ಈ ಹಿಂದಿನಿಂದಲೂ ತಂಟೆ-ತಕರಾರು ಮಾಡುತ್ತಿದ್ದರು. ಮೇ 12ರಂದು ಬೆಳಿಗ್ಗೆ ಆರೋಪಿತ ವೆಂಕಟು ಗೌಡ ನಡೆದಾಡುವ ದಾರಿಗೆ ಬೇಲಿ ಕಟ್ಟಲು ಮುಂದಾಗಿದ್ದು, ಇದನ್ನು ಲೀಲಾವತಿ ವಿರೋಧಿಸಿ ಮೊಬೈಲ್ನಲ್ಲಿ ವಿಡಿಯೋ ಮಾಡುತ್ತಿದ್ದರು.
ಈ ವೇಳೆ ಕೋಪಗೊಂಡ ಆರೋಪಿ ವೆಂಕಟು ಗೌಡ ಮಹಿಳೆಯ ಕೂದಲು ಹಿಡಿದು ಎಳೆದಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಿಂದ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಜಗಳ ಬಿಡಿಸಲು ಬಂದ ಫಿರ್ಯಾದಿಯ ವಯಸ್ಸಾದ ತಂದೆ-ತಾಯಿಗೂ ನಿಂದಿಸಿದ್ದಾರೆ.
ಬಳಿಕ ವೆಂಕಟು ಹಾಗೂ ದೇವಕಿ ಇಬ್ಬರೂ ಸೇರಿ ಕಟ್ಟಿಗೆಯ ಬಡಿಗೆಯಿಂದ ಹಲ್ಲೆ ನಡೆಸಿದ್ದು, ತಲೆಗೆ ಹೊಡೆದ ಪರಿಣಾಮ ಲೀಲಾವತಿಗೆ ಗಾಯವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಬೆನ್ನಿನ ಮೇಲೂ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.