ಯಲ್ಲಾಪುರ: ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಡೆದ ಗೀತಾಜ್ಞಾನ ಯಜ್ಞ ಸಮಿತಿಯ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಪ್ರಧಾನ ಗುರು ಸುಬ್ರಾಯ ನಂದೋಡಿಯವರು ರಚಿಸಿರುವ ʻಶ್ರೀಮದ್ಭಗವದ್ಗೀತಾ ಅಧ್ಯಯನ ಮತ್ತು ಸಂದೇಶʼ ಎಂಬ ಬೃಹತ್ ಗ್ರಂಥವು ಮೂರು ಸಂಪುಟಗಳಲ್ಲಿ ಲೋಕಾರ್ಪಣೆಗೊಂಡಿತು.
ಮೂಲ ಶ್ಲೋಕ, ಪಾರಾಯಣ ಯೋಗ್ಯ ಶ್ಲೋಕ, ಪದಚ್ಛೇದ ಹಾಗೂ ಅರ್ಥ ಸಹಿತ ವ್ಯಾಖ್ಯಾನವನ್ನು ಒಳಗೊಂಡಿರುವ ಈ ಗ್ರಂಥವು ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದ್ದು, ಸಂಸ್ಕೃತ ತಿಳಿಯದವರಿಗೂ ಸುಲಭವಾಗಿ ಗೀತೆಯನ್ನು ಅರ್ಥೈಸಿಕೊಳ್ಳಲು ಸಹಾಯಕವಾಗುವ ಮಾರ್ಗದರ್ಶಿ ಗ್ರಂಥವಾಗಿ ಪರಿಗಣಿಸಲಾಗಿದೆ.
ಗೀತಾಜ್ಞಾನ ಯಜ್ಞದ ಸದಸ್ಯರು ನಾಲ್ಕು ತಿಂಗಳಿಗೊಮ್ಮೆ ʻಸ್ನೇಹ ಸಮ್ಮಿಲನʼ ಹೆಸರಿನಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಒಂದೆಡೆ ಸೇರಿ ಗೀತಾ ಪಾರಾಯಣ ಹಾಗೂ ಗೀತಾ ಪ್ರಸಾರ ಕಾರ್ಯವನ್ನು ನಡೆಸುತ್ತಿದ್ದಾರೆ.
ಈಗಾಗಲೇ 10ಕಡೆಗಳಲ್ಲಿ ಯಶಸ್ವಿಯಾಗಿ ಸ್ನೇಹ ಸಮ್ಮಿಲನ ಕಾರ್ಯಕ್ರಮಗಳು ನಡೆದಿದ್ದು, 11ನೇ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಮೇ 17ರಂದು ಯಲ್ಲಾಪುರದ ಕಾರ್ಮಿಕ ಭವನದಲ್ಲಿ ನಡೆಯಲಿದೆ.
ಆನ್ಲೈನ್ ಮೂಲಕ ಪರಿಚಯವಾದ ಸದಸ್ಯರು ಒಂದೆಡೆ ಸೇರಿ ಆತ್ಮೀಯತೆ ಬೆಳೆಸಿಕೊಳ್ಳುವ ವೇದಿಕೆಯಾಗಿರುವ ಈ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಇದೇ ಸಂದರ್ಭದಲ್ಲಿ “ಗೀತಾಮಹಾತ್ಮೆ” ಮತ್ತು “ಗೀತಾಜ್ಞಾನ ಸುಧಾ” ಪುಸ್ತಕಗಳ ಲೋಕಾರ್ಪಣೆಯೂ ನಡೆಯಲಿದೆ.
ಕಾರ್ಯಕ್ರಮವನ್ನು ಬೆಳಿಗ್ಗೆ 9.30ಕ್ಕೆ ಡಾ. ವಿ. ಶಂಕರ ಭಟ್ಟ ಬಾಲಿಗದ್ದೆ ದಂಪತಿಗಳು ಉದ್ಘಾಟಿಸಲಿದ್ದಾರೆ. ನೇತ್ರ ತಜ್ಞೆ ಡಾ. ಸೌಮ್ಯ ಕೆ.ವಿ. ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಿದ್ದು, ದಿವಾಕರ ಹೆಗಡೆ ಕೆರೆಹೊಂಡ ಪ್ರಧಾನ ಭಾಷಣ ಮಾಡಲಿದ್ದಾರೆ. ಪ್ರಧಾನ ಗುರು ಸುಬ್ರಾಯ ನಂದೋಡಿಯವರು ಸಂದೇಶ ನೀಡಲಿದ್ದಾರೆ ಎಂದು ಗೀತಾ ಜ್ಞಾನ ಯಜ್ಞ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.