ಸಿದ್ದಾಪುರ: ರಾಜ್ಯ ಅರಣ್ಯ ಹಕ್ಕು ಉಸ್ತುವಾರಿ ಸಮಿತಿಯ ನಿರ್ದೇಶನಗಳಿಗೆ ವಿರುದ್ಧವಾಗಿ ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಗಳಲ್ಲಿ ಮಹಜರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಆರೋಪಿಸಿರುವ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ, ಅರಣ್ಯವಾಸಿಗಳ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ನಿರ್ಧಾರ ಕೈಗೊಂಡಿದೆ.
ಈ ಕುರಿತು ವೇದಿಕೆಯ ಸಂಚಾಲಕರಾದ ಹರಿಹರ ನಾಯ್ಕ ಓಂಕಾರ ಹಾಗೂ ನಾಗಪತಿ ಗೌಡ ಹುತ್ತಾ ಪ್ರಕಟಣೆ ನೀಡಿದ್ದು, ನಿಲ್ಕುಂದದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಜರ್ ಪ್ರಕ್ರಿಯೆಯಲ್ಲಿನ ನ್ಯೂನ್ಯತೆಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಯಿತು ಎಂದು ತಿಳಿಸಿದ್ದಾರೆ.
ಅರಣ್ಯವಾಸಿಗಳಿಗೆ ನೈಜ ಕಾನೂನು ಮಾಹಿತಿ ತಲುಪಿಸುವ ಉದ್ದೇಶದಿಂದ ಈ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ಪ್ರಸ್ತುತ ನಡೆಯುತ್ತಿರುವ ಮಹಜರ್ ಪ್ರಕ್ರಿಯೆಯಲ್ಲಿ ಹಲವು ಗಂಭೀರ ದೋಷಗಳಿದ್ದು, ಅರಣ್ಯವಾಸಿಗಳಿಗೆ ಪೂರ್ವ ನೋಟಿಸ್ ನೀಡದೇ ಮಹಜರ್ ನಡೆಸುವುದು, ಊರ ಪ್ರಮುಖರ ಉಪಸ್ಥಿತಿಗೆ ಅವಕಾಶ ನೀಡದಿರುವುದು, ಪೂರ್ಣ ಪ್ರಮಾಣದ ಅಧಿಕಾರಿಗಳ ತಂಡ ಹಾಜರಿರದಿರುವುದು, ಮುದ್ರಿತ ಮಹಜರ್ ಫಾರಂ ಬಳಸಿ ಯಾಂತ್ರಿಕವಾಗಿ ಕಾರ್ಯ ನಡೆಸುವುದು ಹಾಗೂ ಸಾಗುವಳಿ ಕ್ಷೇತ್ರದ ಸಾಂದರ್ಭಿಕ ದಾಖಲೆಗಳನ್ನು ಉಲ್ಲೇಖಿಸದೇ ಇರುವಂತಹ ಅಂಶಗಳನ್ನು ನ್ಯೂನ್ಯತೆ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿನಾಯಕ ನಾಯ್ಕ ಜೋಗಿನಮನೆ, ರಮೇಶ ಗೌಡನಹೊಸ್ತೋಟ, ಮಾಭೇಶ್ವರ ನಾಯ್ಕ ಜೋಗಿನಮನೆ, ರವೀಶ್ ಹುಲ್ದಾರ್, ಶರಾವತಿ ಗೌಡ ಹುತ್ತಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ವೇಳೆ, ಮಹಜರ್ ಪ್ರಕ್ರಿಯೆಯಲ್ಲಿನ ನ್ಯೂನ್ಯತೆಗಳ ಕುರಿತು ತಾಲೂಕಾಡಳಿತದ ಗಮನ ಸೆಳೆಯಲು ಮೇ 20ರಂದು ಅರಣ್ಯವಾಸಿಗಳ ನಿಯೋಗವು ತಾಲೂಕು ದಂಡಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಲಿದೆ ಎಂದು ತಾಲೂಕು ಸಂಚಾಲಕ ಸೀತಾರಾಮ ಗೌಡ ಹುಕ್ಕಳಿ ತಿಳಿಸಿದ್ದಾರೆ.