ಭಟ್ಕಳ: ಟೆಲಿಗ್ರಾಂ ಆ್ಯಪ್ ಮೂಲಕ ಇತರರ ಆಧಾರ್ ಕಾರ್ಡ್ ಹಾಗೂ ವೈಯಕ್ತಿಕ ಮಾಹಿತಿಯನ್ನು ಬಳಸಿರುವ ಆರೋಪದಡಿ ಅಪ್ರಾಪ್ತ ವಿದ್ಯಾರ್ಥಿಯೊಬ್ಬನ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ.
ಹಾವೇರಿ ಜಿಲ್ಲೆಯ ಕುನ್ನೂರ ತಡಸ ಮೂಲದ, ಭಟ್ಕಳದ ಶಿರಾಲಿಯ ಗುಮ್ಮನಹಿತ್ಲು ನಿವಾಸಿಯಾದ ಇನ್ನೂ 17ರ ಪ್ರಾಯದ ವಿದ್ಯಾರ್ಥಿಯಾದ ಆರೋಪಿತ, ತನ್ನ ಸ್ನೇಹಿತ ರಿತೇಶ ದೇವಿದಾಸ ನಾಯ್ಕ ಅವರ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಟೆಲಿಗ್ರಾಂ ಐಡಿ ಸೃಷ್ಟಿಸಿದ್ದಾನೆ ಎನ್ನಲಾಗಿದೆ. ಬಳಿಕ ಆ ಟೆಲಿಗ್ರಾಂ ಖಾತೆಯನ್ನು ಬಳಸುವ ವೇಳೆ ಅನೇಕ ಜನರ ಆಧಾರ್ ಕಾರ್ಡ್ ಹಾಗೂ ಇತರೆ ವೈಯಕ್ತಿಕ ಮಾಹಿತಿಗಳು ಪತ್ತೆಯಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಅಡಿಯಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.