ಯಲ್ಲಾಪುರ: 12 ಲಕ್ಷ ರೂ ಹೂಡಿಕೆ ಮಾಡಿದರೆ ಒಂದು ವಾರದಲ್ಲಿ 1 ಕೋಟಿ ರೂ ಲಾಭ ನೀಡುವುದಾಗಿ ನಂಬಿಸಿ ಮೋಸ ಮಾಡಿರುವ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಲ್ಲಾಪುರದ ಜಂಬೇಸಾಲ ನಿವಾಸಿ ಪ್ರಮೋದ್ ಶಿವರಾಮ ಹೆಗಡೆ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಧಾರವಾಡ ನಿವಾಸಿ ಹೇಮಾವತಿ ಜಯಪ್ರಕಾಶ್ ಸೇರಿದಂತೆ ಹೈದರಾಬಾದ್ ಮೂಲದ ಅನುಶ್ರೀ ಎಂಟರ್ಪ್ರೈಸಸ್ ಸಂಸ್ಥೆಯ ಕಾರ್ಡ್ ಹೋಲ್ಡರ್ ಸಿಮ್ಸನ್ ಹಾಗೂ ಸಿಬ್ಬಂದಿಗಳಾದ ಹರ್ಷ ಶಿರಸಿ ಮತ್ತು ರಕ್ಷಿತಾ ವಿರುದ್ಧ ಆರೋಪ ಕೇಳಿಬಂದಿದೆ.
ಪರಿಚಯದ ಹಿನ್ನೆಲೆಯಲ್ಲಿ ವಿಶ್ವಾಸ ಗಳಿಸಿದ್ದ ಮೊದಲ ಆರೋಪಿತೆ ಹೇಮಾವತಿ 2025ರ ಅಕ್ಟೋಬರ್ 30ರಂದು ದೂರವಾಣಿ ಮೂಲಕ ಸಂಪರ್ಕಿಸಿ, ಲಾಭದಾಯಕ ವ್ಯವಹಾರವೊಂದರಲ್ಲಿ ಹಣ ಹೂಡಿಕೆ ಮಾಡಿದರೆ ಒಂದು ವಾರದೊಳಗೆ ₹1 ಕೋಟಿ “ಟ್ರೇಡ್ ಪ್ರಾಫಿಟ್ ಫಂಡ್” ನೀಡುವುದಾಗಿ ಹೇಳಿದ್ದರು.
ಮೊದಲು ₹15 ಲಕ್ಷ ಹೂಡಿಕೆ ಮಾಡುವಂತೆ ತಿಳಿಸಿದ್ದರೂ, ನಂತರ ತಕ್ಷಣ ₹12 ಲಕ್ಷ ಹಣವನ್ನು ಹೈದರಾಬಾದ್ನ ಅನುಶ್ರೀ ಎಂಟರ್ಪ್ರೈಸಸ್ ಕಂಪನಿಯ ಖಾತೆಗೆ ವರ್ಗಾವಣೆ ಮಾಡುವಂತೆ ಸೂಚಿಸಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಯುಕೇ ಸೌಹಾರ್ದ ಸಹಕಾರಿ ಸಂಘದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಖಾತೆಯಿಂದ ಐಸಿಐಸಿಐ ಬ್ಯಾಂಕ್ ಹೈದರಾಬಾದ್ ಶಾಖೆಯ ಖಾತೆಗೆ ₹12 ಲಕ್ಷ ಹಣ ವರ್ಗಾವಣೆ ಮಾಡಲಾಗಿದೆ.
ನಂತರ ಹಣ ವಾಪಸ್ ನೀಡುವ ವಿಚಾರದಲ್ಲಿ ಆರೋಪಿತರು ಹಲವು ಬಾರಿ ಸಮಯ ಕೇಳಿದ್ದು, ಬಳಿಕ ಕಂಪನಿಯಿಂದ ತಾನೂ ಮೋಸ ಹೋಗಿದ್ದೇನೆ ಎಂದು ಮೊದಲ ಆರೋಪಿತೆ ಹೇಳಿಕೊಂಡಿದ್ದಾಳೆ. ನಂತರ ಹಣ ಕೇಳಿದಾಗ “ನಿಮ್ಮ ಲಾಭಕ್ಕಾಗಿ ನೀವು ಹಣ ಹೂಡಿಕೆ ಮಾಡಿದ್ದೀರಿ, ನನಗೆ ಸಂಬಂಧವಿಲ್ಲ” ಎಂದು ಹೇಳಿ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.