ಕಾರವಾರ: ವಿಶ್ವ ಪರಿಸರ ದಿನಾಚರಣೆ-2026 ಅಂಗವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರವಾರ ಪ್ರಾದೇಶಿಕ ಕಚೇರಿ ವತಿಯಿಂದ ವಿಶೇಷ ರೀಲ್ಸ್ ಸ್ಪರ್ಧೆ ಆಯೋಜಿಸಲಾಗಿದೆ.
“ಪ್ರಕೃತಿಯಿಂದ ಪ್ರೇರಿತ, ಉತ್ತಮ ಹವಾಮಾನಕ್ಕಾಗಿ, ಮುಂದಿನ ಭವಿಷ್ಯಕ್ಕಾಗಿ” ಎಂಬ ಧ್ಯೇಯವಾಕ್ಯದಡಿ ನಡೆಯಲಿರುವ ಈ ಸ್ಪರ್ಧೆಯ ಉದ್ದೇಶ ಪರಿಸರ ಸಂರಕ್ಷಣೆ, ಹವಾಮಾನ ಬದಲಾವಣೆ, ಸುಸ್ಥಿರ ಜೀವನಶೈಲಿ ಹಾಗೂ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಾಗಿದೆ.
ಜಿಲ್ಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಸಂಶೋಧಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧಾರ್ಥಿಗಳು ತಮ್ಮ ಸೃಜನಶೀಲತೆಯನ್ನು ಬಳಸಿಕೊಂಡು 60ರಿಂದ 120 ಸೆಕೆಂಡುಗಳ ಅವಧಿಯ ಮೂಲ ರೀಲ್ಸ್ ವಿಡಿಯೊಗಳನ್ನು ಸಿದ್ಧಪಡಿಸಿ ಎಂಪಿ4 ಅಥವಾ ಎಂಒವಿ ರೂಪದಲ್ಲಿ ಸಲ್ಲಿಸಬೇಕು.
ವಿಡಿಯೊಗಳು ಸ್ಪರ್ಧೆಯ ವಿಷಯವಸ್ತುವಿಗೆ ಹೊಂದಿಕೆಯಾಗಿರಬೇಕು. ಅಸಭ್ಯ, ಮಾನಹಾನಿಕಾರಕ ಅಥವಾ ಧಾರ್ಮಿಕವಾಗಿ ಸೂಕ್ಷ್ಮ ವಿಷಯಗಳನ್ನು ಒಳಗೊಂಡಿರಬಾರದು ಎಂದು ಮಂಡಳಿ ಸ್ಪಷ್ಟಪಡಿಸಿದೆ.
ವಿಜೇತರಿಗೆ ಆಕರ್ಷಕ ನಗದು ಬಹುಮಾನ ಘೋಷಿಸಲಾಗಿದ್ದು, ಪ್ರಥಮ ಬಹುಮಾನ 3,000, ದ್ವಿತೀಯ 2,000 ಹಾಗೂ ತೃತೀಯ 1,000 ರೂ ನೀಡಲಾಗುತ್ತದೆ.
ಭಾಗವಹಿಸುವವರು ತಮ್ಮ ರೀಲ್ಸ್ ಲಿಂಕ್ನ್ನು ಹೆಸರು, ವಯಸ್ಸು, ಸಂಪರ್ಕ ಸಂಖ್ಯೆ ಹಾಗೂ ಸ್ಥಳದ ವಿವರಗಳೊಂದಿಗೆ karwar@kspcb.gov.in ಅಥವಾ kspcbkarwar@gmail.com ಗೆ ಇ-ಮೇಲ್ ಮೂಲಕ ಅಥವಾ ವಾಟ್ಸ್ಆಪ್ ಮೂಲಕ ಕಳುಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ 9980081886 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ. ಜೂನ್ 2 ರೊಳಗೆ ರೀಲ್ಸ್ ಸಲ್ಲಿಸಬೇಕು. ಜೂನ್ 5ರಂದು ನಡೆಯುವ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಪರಿಸರ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.