ಸಿದ್ದಾಪುರ: ತಾಲೂಕಿನ ಶೇಲೂರು ಗ್ರಾಮದಲ್ಲಿ ಬಾವಿ ನೀರು ಬಳಕೆ ವಿಚಾರವಾಗಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದತ್ತಾತ್ರೇಯ ನಾಗಾ ನಾಯ್ಕ (56) ನೀಡಿದ ದೂರಿನ ಆಧಾರದಲ್ಲಿ ಪರಮೇಶ್ವರ ನಾಗಾ ನಾಯ್ಕ, ರಾಧಾ ಪರಮೇಶ್ವರ ನಾಯ್ಕ, ಶೇಖರ ಮಾಬ್ಲ ನಾಯ್ಕ ಹಾಗೂ ಹೇಮಂತ ಶೇಖರ ನಾಯ್ಕ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಫಿರ್ಯಾದಿದಾರರು ಮನೆಯ ಪಕ್ಕದ ಬಾವಿಯ ನೀರನ್ನು ದಿನನಿತ್ಯ ಬಳಕೆ ಮಾಡುತ್ತಿದ್ದು, ಆರೋಪಿಗಳು ನೀರು ಬಳಸಲು ಅಡ್ಡಿಪಡಿಸುತ್ತಾ ತೊಂದರೆ ನೀಡುತ್ತಿದ್ದರು.
ಮೇ 27ರಂದು ಸಂಜೆ ವೇಳೆ ಬಾವಿಯಲ್ಲಿ ನೀರು ಕಲುಷಿತಗೊಳಿಸುತ್ತಿದ್ದ ಬಗ್ಗೆ ಪ್ರಶ್ನಿಸಿದಾಗ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಫಿರ್ಯಾದಿದಾರರ ಪತ್ನಿ ಮಧ್ಯಪ್ರವೇಶಿಸಲು ಬಂದಾಗ ಅವರ ಮೇಲೂ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ಸಂಬಂಧ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.