ಮುರ್ಡೇಶ್ವರ: ರಸ್ತೆ ಬದಿಯಲ್ಲಿ ಮಲಗಿದ್ದ ಕುಟುಂಬದ ಮಧ್ಯದಿಂದಲೇ ಪುಟ್ಟ ಮಗು ನಾಪತ್ತೆಯಾಗಿರುವ ಘಟನೆ ಮುರ್ಡೇಶ್ವರದಲ್ಲಿ ಬೆಳಕಿಗೆ ಬಂದಿದ್ದು, ಅಪಹರಣ ಶಂಕೆಯ ಮೇರೆಗೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಶೋಭಾ ಕುಮಾರಿ (35) ಅವರು ನೀಡಿದ ದೂರಿನಂತೆ, ಕುಟುಂಬವು ಊರು-ಊರು ತಿರುಗಿ ಗುಜರಿ ಸಂಗ್ರಹಿಸುವ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದೆ. ಸುಮಾರು ಎರಡು ವಾರಗಳ ಹಿಂದೆ ಅವರು ಮುರ್ಡೇಶ್ವರಕ್ಕೆ ಬಂದು ರೈಲು ನಿಲ್ದಾಣದ ಸಮೀಪದ ರಸ್ತೆ ಬದಿಯಲ್ಲಿರುವ ಅಂಗಡಿಯೊಂದರ ಮುಂದೆ ತಂಗಿದ್ದರು.
ಮೇ 28ರ ರಾತ್ರಿ ಊಟ ಮುಗಿಸಿದ ಬಳಿಕ ಶೋಭಾ ಕುಮಾರಿ, ಅವರ ಪತಿ ಹಾಗೂ ಪುತ್ರನೊಂದಿಗೆ ರಾತ್ರಿ 11 ಗಂಟೆ ಸುಮಾರಿಗೆ ಮಲಗಿದ್ದರು. ಮಗುವನ್ನು ದಂಪತಿ ತಮ್ಮ ಮಧ್ಯದಲ್ಲಿ ಮಲಗಿಸಿಕೊಂಡಿದ್ದರು. ಮುಂಜಾನೆ ಸುಮಾರು 3 ಗಂಟೆಗೆ ಎಚ್ಚರವಾದಾಗ ಮಗು ತಮ್ಮ ಮಧ್ಯದಲ್ಲೇ ಮಲಗಿರುವುದನ್ನು ಗಮನಿಸಿದ್ದರು.
ಆದರೆ ಬೆಳಿಗ್ಗೆ ಸುಮಾರು 6 ಗಂಟೆಗೆ ಮತ್ತೆ ಎಚ್ಚರವಾದಾಗ ಮಗು ಕಾಣೆಯಾಗಿತ್ತು. ಬಳಿಕ ಸುತ್ತಮುತ್ತ ಎಲ್ಲೆಡೆ ಹುಡುಕಾಟ ನಡೆಸಿದರೂ ಮಗುವಿನ ಸುಳಿವು ಸಿಗಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತಾವು ಗಾಢ ನಿದ್ರೆಯಲ್ಲಿದ್ದ ವೇಳೆ ಯಾರೋ ಅಪರಿಚಿತರು ಮಗುವನ್ನು ಅಪಹರಿಸಿ ಕೊಂಡೊಯ್ದಿರುವ ಸಾಧ್ಯತೆ ಇದೆ ಎಂದು ಶಂಕಿಸಿ, ಮಗುವನ್ನು ಪತ್ತೆಹಚ್ಚಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೋಷಕರು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮಗುವಿನ ಪತ್ತೆಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.