ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಶ್ರೀ ಕ್ಷೇತ್ರ ಮಂಜುಗುಣಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅಧಿಕ ಜ್ಯೇಷ್ಠ ಮಾಸದ ಅಂಗವಾಗಿ ಜೂನ್ 7ರಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರತಿ ಮೂರು ವರ್ಷಗಳಿಗೊಮ್ಮೆ ಬರುವ ಅಪರೂಪದ ಅಧಿಕ ಮಾಸದ ಹಿನ್ನೆಲೆಯಲ್ಲಿ ಈ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಅಧಿಕ ಮಾಸದಲ್ಲಿ ಭಗವಂತನ ಆರಾಧನೆ ಹಾಗೂ ಸೇವೆ ಸಲ್ಲಿಸುವುದರಿಂದ ವಿಶೇಷ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ.
ಅಧಿಕ ಜ್ಯೇಷ್ಠ ಕೃಷ್ಣ ಪಕ್ಷ ಸಪ್ತಮಿಯ ಪ್ರಯುಕ್ತ ಬೆಳಿಗ್ಗೆ 8.30 ಗಂಟೆಗೆ ಶ್ರೀ ದೇವರ ಗರ್ಭಗುಡಿಯಲ್ಲಿ ವಿಶೇಷ ಪೂಜೆ ಹಾಗೂ ಮೂಲಮೂರ್ತಿಗೆ ಶತಧಾರ ಕ್ಷೀರಾಭಿಷೇಕ ನೆರವೇರಲಿದೆ.
ಬಳಿಕ ಬೆಳಿಗ್ಗೆ 11 ಗಂಟೆಯಿಂದ ನೂತನ ಭೂವೈಕುಂಠ ದ್ವಾರ ಮಂಟಪದಲ್ಲಿ ರಜತ ಪೀಠದಲ್ಲಿ ಪ್ರತಿಷ್ಠಾಪಿಸಲ್ಪಡುವ ಪ್ರಧಾನ ಉತ್ಸವ ಮೂರ್ತಿಗೆ ವಿಷ್ಣು ಸಹಸ್ರನಾಮ ತುಳಸಿ ಅರ್ಚನೆ, 333 ದೀಪಾರಾಧನೆ, ದೀಪ ನಮಸ್ಕಾರ, 33 ಅಪೂಪ ಪೂಜೆ, ದಾನ ಹಾಗೂ ದ್ರವ್ಯಾಂಜಲಿ ಸೇವೆಗಳು ನಡೆಯಲಿವೆ.
ಕಾರ್ಯಕ್ರಮದ ನಂತರ ಭಕ್ತರಿಗೆ ಪ್ರಸಾದ ಭೋಜನದ ವ್ಯವಸ್ಥೆ ಮಾಡಲಾಗಿದ್ದು, ವಿವಿಧ ಸೇವೆಗಳಲ್ಲಿ ಭಕ್ತರು ತಮ್ಮ ಇಚ್ಛೆಯಂತೆ ಪಾಲ್ಗೊಳ್ಳಬಹುದಾಗಿದೆ ಎಂದು ದೇವಸ್ಥಾನ ಆಡಳಿತ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ 8277226708, 6362024921, 9481585013 ಹಾಗೂ 8277419657 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದಾಗಿದೆ.
ಅಧಿಕ ಮಾಸದ ಈ ಅಪರೂಪದ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಶ್ರೀ ವೆಂಕಟರಮಣನ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.