ಶಿರಸಿ: ಸಾರ್ವಜನಿಕ ಸ್ಥಳದಲ್ಲಿ ಓಸಿ (ಮಟ್ಕಾ) ಜೂಜಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಶಿರಸಿ ನಗರ ಠಾಣೆ ಪೊಲೀಸರು ಬಂಧಿಸಿ, ಜೂಜಾಟಕ್ಕೆ ಬಳಸುತ್ತಿದ್ದ ನಗದು ಹಾಗೂ ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಶಿರಸಿ ತಾಲೂಕಿನ ನಿರ್ನಳ್ಳಿ ಗ್ರಾಮದ ಮಹೇಶ ಕೇಶವ ಹೆಗಡೆ (44) ಬಂಧಿತ ಆರೋಪಿ.
ಜೂನ್ 12ರಂದು ಮಧ್ಯಾಹ್ನ 1.15ರ ಸುಮಾರಿಗೆ ಶಿರಸಿ ನಗರದ ಆನೆಹೊಂಡ ಕಚ್ಚಾ ರಸ್ತೆ ಬದಿಯ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ತನ್ನ ಅನ್ಯಾಯದ ಲಾಭಕ್ಕಾಗಿ ಬರುವ-ಹೋಗುವ ಜನರಿಗೆ ಒಂದು ರೂಪಾಯಿಗೆ 80 ರೂಪಾಯಿ ನೀಡುವುದಾಗಿ ಹೇಳಿ ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿಸಿಕೊಂಡು ಓಸಿ ಮಟ್ಕಾ ಜೂಜಾಟ ನಡೆಸುತ್ತಿದ್ದಾನೆ ಎಂಬ ಮಾಹಿತಿ ಮೇರೆಗೆ ಶಿರಸಿ ನಗರ ಪೊಲೀಸ್ ಠಾಣೆಯ ಪಿಎಸ್ಐ ನರಸಿಂಹಲು ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ದಾಳಿ ವೇಳೆ ಆರೋಪಿಯಿಂದ ₹570 ನಗದು, ಅಂಕೆ-ಸಂಖ್ಯೆ ಬರೆದ ಒಂದು ಚೀಟಿ, ಒಂದು ಬಾಲ್ ಪೆನ್ ಹಾಗೂ ಜೂಜಾಟದ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.