Ad
Home Local News ಬಿಎಸ್‌ಎನ್‌ಎಲ್ ಸೇವಾ ವೈಫಲ್ಯಕ್ಕೆ ಗ್ರಾಹಕರ ಆಕ್ರೋಶ

ಬಿಎಸ್‌ಎನ್‌ಎಲ್ ಸೇವಾ ವೈಫಲ್ಯಕ್ಕೆ ಗ್ರಾಹಕರ ಆಕ್ರೋಶ

0
7

ಮೂರು ದಿನದಲ್ಲಿ ಸಮಸ್ಯೆ ಪರಿಹಾರದ ಭರವಸೆ

ಯಲ್ಲಾಪುರ: ತಾಲೂಕಿನ ಕನ್ನಡಗಲ್, ತಿಮ್ಮಾಪುರ, ಬೀಸಗಾಳ, ವಡೆಹೊಕ್ಕಳಿ ಹಾಗೂ ಕಣ್ಣಿಗೇರಿ ಭಾಗಗಳಲ್ಲಿ ಬಿಎಸ್‌ಎನ್‌ಎಲ್ ಸೇವೆ ತೀವ್ರವಾಗಿ ಹದಗೆಟ್ಟಿದ್ದು, ಎಫ್‌ಟಿಟಿಎಚ್ ಸಂಪರ್ಕ ಹೊಂದಿರುವ 40ಕ್ಕೂ ಹೆಚ್ಚು ಮನೆಗಳ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಸೋಮವಾರ ಬಿಎಸ್‌ಎನ್‌ಎಲ್ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಈ ಭಾಗದಲ್ಲಿ ಹಲವು ದಿನಗಳಿಂದ ಇಂಟರ್ನೆಟ್ ಸಂಪರ್ಕ ಸ್ಥಗಿತಗೊಂಡಿದ್ದು, ಸರಳ ಸಂದೇಶ ಕಳುಹಿಸಲು ಸಹ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಹಕರು ದೂರಿದರು. ಶಾಲಾ ವಿದ್ಯಾರ್ಥಿಗಳು ಆನ್‌ಲೈನ್ ಅಧ್ಯಯನ ಹಾಗೂ ಕಂಪ್ಯೂಟರ್ ಆಧಾರಿತ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದರು.

ಗಣಪತಿ ಗುಮ್ಮಾನಿ, ನಾರಾಯಣ ಗುಮ್ಮಾನಿ, ಶ್ರೀಪಾದ ಮೆಣಸುಮನೆ, ಸುಬ್ರಹ್ಮಣ್ಯ ಮೆಣಸುಪಾಲ, ಮಂಜುನಾಥ ಹೆಗಡೆ, ಮಂಜುನಾಥ ಪಾಟೀಲ ಹಾಗೂ ಕೃಷ್ಣ ಶೆಟ್ಟಿ ಅವರ ನೇತೃತ್ವದಲ್ಲಿ ಗ್ರಾಹಕರು ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಗಮನ ಸೆಳೆದರು.

ಈ ವೇಳೆ ಇಲಾಖೆಯ ಪರವಾಗಿ ಲೈನ್‌ಮನ್ ನಿತ್ಯಾನಂದ ಹಾಗೂ ರಾಘವೇಂದ್ರ ಶೆಟ್ಟಿ ಮನವಿ ಸ್ವೀಕರಿಸಿ, ಸಮಸ್ಯೆ ಪರಿಹಾರಕ್ಕೆ ಮೂರು ದಿನಗಳ ಕಾಲಾವಕಾಶ ನೀಡುವಂತೆ ಕೋರಿದರು. ಶೀಘ್ರದಲ್ಲೇ ಎಲ್ಲಾ ತಾಂತ್ರಿಕ ದೋಷಗಳನ್ನು ಸರಿಪಡಿಸಿ ಸೇವೆ ಪುನರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಮನವಿ ಸ್ವೀಕರಿಸಬೇಕಿದ್ದ ಜನರಲ್ ಟೆಲಿಫೋನ್ ಆಪರೇಟರ್ (ಜಿಟಿಒ) ಕಚೇರಿಯಲ್ಲಿ ಲಭ್ಯವಿರದ ಕಾರಣ, ದೂರವಾಣಿ ಮೂಲಕ ವಿಷಯ ತಿಳಿಸಿ ಮನವಿ ಸಲ್ಲಿಸಲಾಯಿತು. ಮೂರು ದಿನಗಳೊಳಗೆ ಸಮಸ್ಯೆ ಬಗೆಹರಿಯದಿದ್ದಲ್ಲಿ ಮತ್ತೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಗ್ರಾಹಕರು ಎಚ್ಚರಿಕೆ ನೀಡಿದರು.

ಇದೇ ವೇಳೆ ಎಫ್‌ಟಿಟಿಎಚ್ ಫ್ರಾಂಚೈಸಿ ಪ್ರತಿನಿಧಿ ಚಂದ್ರಶೇಖರ ಜಿ.ನಾಯ್ಕ ಮಾತನಾಡಿ, ತಕ್ಷಣವೇ ದುರಸ್ತಿ ಕಾರ್ಯ ಆರಂಭಿಸಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ನಾರಾಯಣ ಭಟ್ಟ, ಸುಬ್ರಾಯ ಹೆಗಡೆ, ವೆಂಕಟ್ರಮಣ ಭಟ್ಟ, ಮಂಜುನಾಥ ಅನಂತ ಹೆಗಡೆ, ಗಣಪತಿ ನಳೆಗುಳಿ ಸೇರಿದಂತೆ 40ಕ್ಕೂ ಹೆಚ್ಚು ಗ್ರಾಹಕರು ಪಾಲ್ಗೊಂಡಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!