ಸಮಗ್ರ ಯಜುರ್ವೇದ ಪಾರಾಯಣ ಸಾಧನೆಗೆ ಶ್ಲಾಘನೆ
ಶಿರಸಿ: ಮಲೆನಾಡಿನ ಕೃಷಿಕರ ಜೀವನಾಧಾರ ಬೆಳೆಯಾದ ಅಡಕೆಗೆ ಮಾರಕವಾಗಿರುವ ಎಲೆಚುಕ್ಕಿ ಸೇರಿದಂತೆ ವಿವಿಧ ರೋಗಬಾಧೆಗಳು ನಿವಾರಣೆಯಾಗಲಿ, ಪರಿಸರಕ್ಕೆ ಹಾನಿಕಾರಕ ಯೋಜನೆಗಳು ಶಾಶ್ವತವಾಗಿ ಸ್ಥಗಿತಗೊಳ್ಳಲಿ ಹಾಗೂ ರಾಷ್ಟ್ರಕ್ಕೆ ಕ್ಷೇಮ-ಸಮೃದ್ಧಿ ಲಭಿಸಲಿ ಎಂಬ ಸಂಕಲ್ಪದೊಂದಿಗೆ ಶಿರಸಿ ತಾಲೂಕಿನ ಭೈರುಂಬೆಯ ಶ್ರೀ ಬಟ್ಟೆ ವಿನಾಯಕ ದೇವಸ್ಥಾನದಲ್ಲಿ ಐದು ದಿನಗಳ ಸಮಗ್ರ ಕೃಷ್ಣಯಜುರ್ವೇದ ಪಾರಾಯಣ ಅನುಷ್ಠಾನ ನಡೆಯಿತು.
ಆಯುಷ್ಮಾನ್ ಭವ-ವಿಜಯೀ ಭವ ಸಂಘಟನೆಯ ಆಶ್ರಯದಲ್ಲಿ, ಕೇಶವ ಹೆಗಡೆ ಗಡಿಕೈ ಅವರ ಯಜಮಾನಿಕೆಯಲ್ಲಿ ನಡೆದ ಈ ವೈದಿಕ ಕಾರ್ಯಕ್ರಮದಲ್ಲಿ ವೇದಪಂಡಿತರು ಭಾಗವಹಿಸಿ ಪಾರಾಯಣ ನಡೆಸಿದರು.
ಈ ಸಂದರ್ಭದಲ್ಲಿ ಯಜುರ್ವೇದವನ್ನು ಅತ್ಯಂತ ಶ್ರದ್ಧೆಯಿಂದ ಅಧ್ಯಯನ ಮಾಡಿ, ಸಮಗ್ರ 82 ಅಧ್ಯಾಯಗಳನ್ನು ಯಾವುದೇ ಪುಸ್ತಕದ ಸಹಾಯವಿಲ್ಲದೆ ಪಾರಾಯಣ ಮಾಡುವ ಮೂಲಕ ವಿಶೇಷ ಸಾಧನೆಗೈದ ಯಲ್ಲಾಪುರ ತಾಲೂಕಿನ ಗುಂಡ್ಕಲ್ ಗ್ರಾಮದ ಸುಮಂಗಲಾ-ಮಂಜುನಾಥ ಭಟ್ಟ ದಂಪತಿಗಳ ಪುತ್ರ ವೇದಮೂರ್ತಿ ಶ್ರೀರಾಮ ಭಟ್ ಗುಂಡ್ಕಲ್ ಅವರನ್ನು ‘ಆಯುಷ್ಮಾನ್ ವೇದನಿಧಿ’ ಬಿರುದಿನೊಂದಿಗೆ ಗೌರವಿಸಿ, ಅವರ ವೈದಿಕ ಸಾಧನೆಯನ್ನು ವಿಶೇಷವಾಗಿ ಶ್ಲಾಘಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ವಾನ್ ಮಂಜುನಾಥ ಜೋಶಿ ಶಿರಸಿ, ಡಾ. ಮಹೇಶ ಭಟ್ ಇಡಗುಂದಿ, ವೇದಮೂರ್ತಿ ಕೃಷ್ಣಮೂರ್ತಿ ಭಟ್ ಕೆರೆಹೊಸಳ್ಳಿ, ವೇದಮೂರ್ತಿ ಚಿನ್ಮಯ ಭಟ್ ಹಿತ್ಲಕೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.