Ad
Home Local News ಕರ್ತವ್ಯಕ್ಕೆ ಹೋದ ವಾಟರ್‌ಮ್ಯಾನ್‌ ಶವವಾಗಿ ಪತ್ತೆ

ಕರ್ತವ್ಯಕ್ಕೆ ಹೋದ ವಾಟರ್‌ಮ್ಯಾನ್‌ ಶವವಾಗಿ ಪತ್ತೆ

0
6

ಹೊನ್ನಾವರ: ತಾಲೂಕಿನ ಖರ್ವಾ ಗ್ರಾಮದಲ್ಲಿ 35 ವರ್ಷಗಳಿಂದ ಗ್ರಾಮ ಪಂಚಾಯತಿಯಲ್ಲಿ ವಾಟರ್‌ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾದ ಒಂದು ದಿನದ ಬಳಿಕ ಹೊಳೆಯಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿರುವ ದುರ್ಘಟನೆ ನಡೆದಿದೆ.

ಮೃತರನ್ನು ಗೋಪಾಲ ವೆಂಕಟ ನಾಯ್ಕ (56) ಎಂದು ಗುರುತಿಸಲಾಗಿದೆ. ಅವರು ಖರ್ವಾದ ನಾಥಗೇರಿ ನಿವಾಸಿಯಾಗಿದ್ದು, ಗ್ರಾಮ ಪಂಚಾಯತಿಯಲ್ಲಿ ವಾಟರ್‌ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಜೂನ್ 18ರಂದು ಬೆಳಿಗ್ಗೆ ಸುಮಾರು 8.15ಕ್ಕೆ ಗೋಪಾಲ ನಾಯ್ಕ ಅವರು ಕರ್ತವ್ಯಕ್ಕೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಮಧ್ಯಾಹ್ನದ ವೇಳೆಗೆ ಗ್ರಾಮ ಪಂಚಾಯತಿಯಿಂದ ಹೊರಟಿದ್ದ ಅವರು ಸಂಜೆ 7 ಗಂಟೆಯಾದರೂ ಮನೆಗೆ ಮರಳಿರಲಿಲ್ಲ.

ಇದರಿಂದ ಆತಂಕಗೊಂಡ ಕುಟುಂಬಸ್ಥರು ವಿವಿಧ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಜೂನ್ 19ರಂದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಬಳಿಕ ಕುಟುಂಬಸ್ಥರು ಹಾಗೂ ಸ್ಥಳೀಯರು ಹುಡುಕಾಟ ಮುಂದುವರಿಸಿದ ವೇಳೆ, ಅದೇ ದಿನ ಮಧ್ಯಾಹ್ನ ಸುಮಾರು 4.10ರ ವೇಳೆಗೆ ವಲ್ಕಿ ಪಳ್ಳಿಯ ಸಮೀಪದ ಗುಂಡಬಾಳ ಹೊಳೆಯಲ್ಲಿ ಗೋಪಾಲ ನಾಯ್ಕ ಅವರ ಮೃತದೇಹ ಪತ್ತೆಯಾಗಿದೆ.

ಗೋಪಾಲ ನಾಯ್ಕ ಅವರು ವಲ್ಕಿ ಪಳ್ಳಿಕೇರಿಯಲ್ಲಿ ಕೆಲಸ ಮುಗಿಸಿದ ಬಳಿಕ ಹೊಳೆಯ ಬಳಿ ಕೈಕಾಲು ತೊಳೆಯಲು ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮುಳುಗಿರಬಹುದು ಎಂದು ಶಂಕಿಸಲಾಗಿದೆ. ಜೂನ್ 18ರ ಮಧ್ಯಾಹ್ನದಿಂದ ಜೂನ್ 19ರ ಮಧ್ಯಾಹ್ನದ ನಡುವಿನ ಅವಧಿಯಲ್ಲಿ ಈ ದುರ್ಘಟನೆ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!