ಅಂಕೋಲಾ: ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಗೋಪಾಲಕೃಷ್ಣ ನಾಯಕ್ ಅವರ ತೇಜೋವಧೆ ಮಾಡುವ ಉದ್ದೇಶದಿಂದ ಅನಧಿಕೃತ ಬ್ಯಾನರ್ಗಳನ್ನು ಪ್ರದರ್ಶಿಸಿ, ಸಾರ್ವಜನಿಕ ಅಶಾಂತಿ ಸೃಷ್ಟಿಸುವ ರೀತಿಯಲ್ಲಿ ಮುಷ್ಕರ ಹಮ್ಮಿಕೊಂಡಿದ್ದಾರೆ ಎಂದು ಆರೋಪಿಸಿ 10 ಮಂದಿಯ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂದಿಗೆ ಗ್ರಾಮದ ಸತೀಶ ವಿಠೋಬ ಆಗೇರ ನೀಡಿದ ದೂರಿನ ಮೇರೆಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇತ್ತೀಚೆಗೆ ಗೋಪಾಲಕೃಷ್ಣ ನಾಯಕ್ ಅವರ ಮೇಲೆ ನಡೆದಿದ್ದ ಕೊಲೆ ಯತ್ನ ಪ್ರಕರಣದ ಬಳಿಕ ಕೆಲವರು ಆರೋಪಿತರ ಪರವಾಗಿ ನಿಂತು, ಘಟನೆಯ ಕುರಿತು ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸುವ ಉದ್ದೇಶದಿಂದ ಬ್ಯಾನರ್ಗಳನ್ನು ಸೃಷ್ಟಿಸಿ ಪ್ರದರ್ಶಿಸಿದ್ದಾರೆ ಎನ್ನಲಾಗಿದೆ.
ಅಲ್ಲದೆ, ಯಾವುದೇ ಇಲಾಖೆಯ ಅನುಮತಿ ಪಡೆಯದೇ ಅನಧಿಕೃತ ಮುಷ್ಕರ ಹಮ್ಮಿಕೊಂಡು ಗೋಪಾಲಕೃಷ್ಣ ನಾಯಕ್ ಅವರ ಮಾನಹಾನಿ ಹಾಗೂ ರಾಜಕೀಯ ಭವಿಷ್ಯಕ್ಕೆ ಧಕ್ಕೆ ಉಂಟುಮಾಡಲು ಪ್ರಯತ್ನಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಇಂತಹ ಬೆಳವಣಿಗೆಗಳಿಂದ ಗೋಪಾಲಕೃಷ್ಣ ನಾಯಕ್ ಅವರ ಬೆಂಬಲಿಗರಲ್ಲಿ ಆಕ್ರೋಶ ಉಂಟಾಗಿದ್ದು, ಅಂಕೋಲಾ ಭಾಗದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಂದಿಗೆ, ಹಿಚ್ಕಡ, ಬಾಸಗೋಡ ಹಾಗೂ ಅಡ್ಲೂರ ಗ್ರಾಮದ 10 ಮಂದಿಯನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ರೋಹನ್ ರಾಮದಾಸ್ ನಾಯಕ್, ರಾಜೇಶ್ ಮಾಣೇಶ್ವರ ನಾಯಕ್, ಹರೀಶ ರಾಮಚಂದ್ರ ನಾಯಕ್, ಜಯಪ್ರಕಾಶ ವೆಂಕಣ್ಣ ನಾಯಕ್, ರಂಜನ್ ರಾಮದಾಸ್ ನಾಯಕ್, ವಿಘ್ನೇಶ್ ನಾಯಕ್, ಮಂಜುನಾಥ ಹಮ್ಮಣ್ಣ ನಾಯಕ್, ನಾಗರಾಜ ವೆಂಕಣ್ಣ ನಾಯಕ್, ಬಿಂದೇಶ್ ಮಾಣೇಶ್ವರ ನಾಯಕ್ ಹಾಗೂ ಗೋಪಾಲ ಹಮ್ಮಣ್ಣ ನಾಯಕ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.