ಜೋಯಿಡಾ: ಟ್ರಾಕ್ಟರ್ಗೆ ಒಂದೇ ಹೆಡ್ಲೈಟ್ ಇದ್ದ ಕಾರಣ ಅದನ್ನು ಬೈಕ್ ಎಂದು ಭಾವಿಸಿದ ಸವಾರನೊಬ್ಬ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕ್ಯಾಸರಲಾಕ್ ನಿವಾಸಿ ದೇವಿದಾಸ ಗುಂಡು ಪಾವಲೆ (60) ಅವರು ನೀಡಿದ ದೂರಿನ ಮೇರೆಗೆ ಜೋಯಿಡಾ ತಾಲೂಕಿನ ಕಾಮ್ರಾ ಗ್ರಾಮದ ವಿಶಾಲ ಬಿಸೋ ಗಾವಡೆ ವಿರುದ್ಧ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂನ್ 2ರಂದು ರಾತ್ರಿ ಸುಮಾರು 9 ಗಂಟೆಗೆ ದೇವಿದಾಸ ಪಾವಲೆ ಅವರು ತಮ್ಮ ಟಿವಿಎಸ್ ಬೈಕ್ನಲ್ಲಿ ಬೆಳಗಾವಿಯಿಂದ ಕ್ಯಾಸರಲಾಕ್ ಕಡೆಗೆ ತೆರಳುತ್ತಿದ್ದರು. ಕೋನಶೇತ ಕ್ರಾಸ್ ಸಮೀಪದ ತಿರುವು ರಸ್ತೆಯಲ್ಲಿ ಎದುರುಗಡೆಯಿಂದ ಮಹೀಂದ್ರಾ ಟ್ರಾಕ್ಟರ್ ಬರುತ್ತಿತ್ತು. ಟ್ರಾಕ್ಟರ್ಗೆ ಒಂದೇ ಹೆಡ್ಲೈಟ್ ಇದ್ದ ಕಾರಣ ಅದು ಬೈಕ್ ಎಂದು ಭಾವಿಸಿದ್ದ ಸವಾರ, ಸಮೀಪ ಬಂದಾಗ ಅದು ಟ್ರಾಕ್ಟರ್ ಎಂಬುದು ಗೊತ್ತಾಗಿದೆ.
ತಕ್ಷಣ ಬೈಕ್ ಅನ್ನು ರಸ್ತೆಯ ಎಡಭಾಗಕ್ಕೆ ಚಲಾಯಿಸಿ ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದರೂ, ವೇಗವಾಗಿ ಬಂದ ಟ್ರಾಕ್ಟರ್ನ ಹಿಂಭಾಗದ ಟ್ರಾಲಿ ಬೈಕ್ ಸವಾರನ ಬಲ ಭುಜಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದ ಪರಿಣಾಮ ದೇವಿದಾಸ ಪಾವಲೆ ಅವರು ಬೈಕ್ ಸಮೇತ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಅವರ ಬಲ ಭುಜದ ಒಳಭಾಗ ಮುರಿದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗಾಯಗೊಂಡ ಅವರನ್ನು ಪರಿಚಯಸ್ಥ ಕೇಶವ ಗಾಂವಕರ ಅವರ ಸಹಾಯದಿಂದ ರಾಮನಗರದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಿಂದ ಜೂನ್ 6ರಂದು ಬಿಡುಗಡೆಯಾದ ಬಳಿಕ ಮನೆಯವರೊಂದಿಗೆ ಚರ್ಚಿಸಿ ಜೂನ್ 20ರಂದು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.