ಸಮಸ್ತ ಭಕ್ತಕುಲವನ್ನು ಕೈಹಿಡಿದು ನಡೆಸುವ ಜಗನ್ಮಾತೆ ಯಲ್ಲಾಪುರ ಶ್ರೀ ಗ್ರಾಮದೇವಿ ಇಂದಿನಿಂದ ವಿಶೇಷ ಅಲಂಕೃತ ಗದ್ದುಗೆಯಲ್ಲಿ ವಿರಾಜಮಾನಳಾಗಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಪ್ರತೀ ಮೂರು ವರ್ಷಕ್ಕೊಮ್ಮೆ ಜರುಗುವ ಕರ್ನಾಟಕದ ಎರಡನೇ ಅತಿದೊಡ್ಡ ʻಯಲ್ಲಾಪುರ ಗ್ರಾಮದೇವಿ ಜಾತ್ರೆʼಗೆ ಕ್ಷಣಗಳನೆ ಆರಂಭವಾಗಿದೆ. ಇಡೀ ಪಟ್ಟಣ ತಳಿರು-ತೋರಣಗಳ ಸಿಂಗಾರದಿಂದ ಕಂಗೊಳಿಸುತ್ತಿದೆ. ದೇವಸ್ಥಾನ ಆಡಳಿತ ಮಂಡಳಿ, ತಾಲೂಕಾಡಳಿತ, ಜಿಲ್ಲಾಡಳಿತ, ಕ್ಷೇತ್ರದ ಜನಪ್ರಿಯ ಶಾಸಕ ಶಿವರಾಮ ಹೆಬ್ಬಾರರ ವಿಶೇಷ ಮುತುವರ್ಜಿ, ಪ್ರಯತ್ನಗಳೊಂದಿಗೆ, ಸಕಲ ಸದ್ಭಕ್ತರ ಸೇವಾ ಕೈಂಕರ್ಯಗಳೊಂದಿಗೆ ಜಾತ್ರೆ ಸಾಂಗವಾಗಿ ನೆರವೇರಲಿದೆ.
ಇದೇ ಶುಭ ಸಂದರ್ಭದಲ್ಲಿ ʻಸಂಜೆಸೂರ್ಯ ಮೀಡಿಯಾʼದ ಕನಸು ʻಕೆನರಾ ನೆಕ್ಸ್ಟ್ʼ ಅನಾವರಣಕ್ಕೂ ಕ್ಷಣಗಣನೆ ಆರಂಭವಾಗಿದೆ. Canara NEXT ಒಂದು ಸ್ವತಂತ್ರ ಡಿಜಿಟಲ್ ನ್ಯೂಸ್ ಪೋರ್ಟಲ್. ಉತ್ತರಕನ್ನಡ ಜಿಲ್ಲೆ ಸೇರಿದಂತೆ ರಾಜ್ಯ, ರಾಷ್ಟ್ರದ ನಿತ್ಯ ಜೀವನಕ್ಕೆ ಸಂಬಂಧಿಸಿದ ನೈಜ, ನಿಖರ ಮತ್ತು ತ್ವರಿತ ಸುದ್ದಿಗಳನ್ನು ಜನರಿಗೆ ತಲುಪಿಸುವುದು ನಮ್ಮ ಮುಖ್ಯ ಉದ್ದೇಶ.
ರಾಜಕೀಯ, ಆಡಳಿತ, ಅಪರಾಧ, ಸಮಾಜ, ಶಿಕ್ಷಣ, ಆರೋಗ್ಯ, ಪರಿಸರ ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾಗುವುದು Canara NEXT ನ ಧ್ಯೇಯ. ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದೇ, ಸತ್ಯದ ಪರ ನಿಂತು ಸುದ್ದಿ ನೀಡಲು ನಾವು ಬದ್ಧರಾಗಿದ್ದೇವೆ. Canara NEXT – ಸುದ್ದಿಯಷ್ಟೇ ಅಲ್ಲ, ಇದು ಜನರ ಧ್ವನಿ!
ಪತ್ರಿಕೋದ್ಯಮದಲ್ಲಿ 10 ವರ್ಷಗಳಿಗೂ ಹೆಚ್ಚು ಕಾಲ ವಿವಿಧ ವಿಭಾಗಗಳಲ್ಲಿ ಕೆಲಸ ನಿರ್ವಹಿಸಿದ ಅನುಭವವುಳ್ಳ ಪತ್ರಕರ್ತರು ನಮ್ಮೊಂದಿಗಿದ್ದಾರೆ. ತಾಲೂಕಿನ, ಜಿಲ್ಲೆಯ ಮಾಧ್ಯಮ ಮಿತ್ರರ ಪ್ರೋತ್ಸಾಹ, ಸಹಕಾರ ನಮಗೆ ಬೆಂಬಲವಾಗಿದೆ. ಸುದ್ದಿಯನ್ನು ಯಾವುದೇ ರಾಜಕೀಯ ಬಣ್ಣವಿಲ್ಲದೆ, ಕೇವಲ ಸುದ್ದಿಯ ರೂಪದಲ್ಲಷ್ಟೇ ನೋಡುವುದು ನಮ್ಮ ಬದ್ಧತೆ. ಇಲ್ಲಿ ನೀವೇ ಮಾಲಕರು. ಇದು ನಿಮ್ಮದೇ ಧ್ವನಿ.
ಇಲ್ಲಿಯವರೆಗಿನ ಪಯಣದಲ್ಲಿ ಜೊತೆಯಾದ ಎಲ್ಲ ಹಿರಿಯ ಪತ್ರಕರ್ತರಿಗೆ, ಮಿತ್ರರಿಗೆ, ಮಾರ್ಗದರ್ಶನ ನೀಡಿದ ವಾರ್ತಾ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳಿಗೆ, ಈ ಸುದ್ದಿ ಪೋರ್ಟಲ್ ಕಟ್ಟುವಲ್ಲಿ ಆರಂಭದಿಂದಲೂ ಜೊತೆಯಾಗಿ ನಿಂತ ಸಹೋದರನಂತಿರುವ ಸನ್ಮಿತ್ರ ರಾಜೇಶ್ ರಾವ್, ಪ್ರತಿಯೊಂದು ಕೆಲಸದಲ್ಲೂ ಕರಾರುವಾಕ್ ಲೆಕ್ಕಾಚಾರದೊಂದಿಗೆ ಕಾರ್ಯರೂಪಕ್ಕಿಳಿಸಿ ರಾಜ್ಯ ಮಟ್ಟದ ನ್ಯೂಸ್ ಪೋರ್ಟಲ್ಗಳಿಗೂ ಕಡಿಮೆಯಿಲ್ಲದಂತೆ ಆಕರ್ಷಕ ವೆಬ್ಸೈಟ್ ನಿರ್ಮಿಸಿಕೊಟ್ಟ ಶಿವನಾರಾಯಣ ಮಾಹ್ಜಿ ಅವರಿಗೂ ಕೃತಜ್ಞ. ನಿಮ್ಮೆಲ್ಲರ ಬೆಂಬಲ, ಸಹಕಾರ, ಪ್ರೋತ್ಸಾಹ ಸದಾ ಇರಲಿ.
- ಸತೀಶ್ ಭಟ್.
ಕೆನರಾ ನೆಕ್ಸ್ಟ್.