ಮೂರು ಗಂಟೆ ಸ್ಥಗಿತಗೊಂಡ ದಾಂಡೇಲಿ–ಹಳಿಯಾಳ ಹೆದ್ದಾರಿ
ದಾಂಡೇಲಿ: ಎದುರಿನಿಂದ ಬಂದ ವಾಹನಕ್ಕೆ ದಾರಿ ಬಿಡಲು ಹೋಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಕೆಸರಿನಲ್ಲಿ ಸಿಲುಕಿದ ಪರಿಣಾಮ, ದಾಂಡೇಲಿ–ಹಳಿಯಾಳ ರಾಜ್ಯ ಹೆದ್ದಾರಿಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಘಟನೆ ಶುಕ್ರವಾರ ನಡೆದಿದೆ.
ಮಂಗಳೂರಿನಿಂದ ದಾಂಡೇಲಿ ಪೇಪರ್ ಮಿಲ್ಗೆ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯು ಅಜಗಾಂವ್ ಸಮೀಪ ಎದುರಿನಿಂದ ಬಂದ ವಾಹನಕ್ಕೆ ದಾರಿ ಬಿಡುವ ವೇಳೆ ರಸ್ತೆ ಬದಿಯ ಕೆಸರಿನಲ್ಲಿ ಸಿಲುಕಿಕೊಂಡಿತು. ಇದರಿಂದ ಹೆದ್ದಾರಿಯ ಎರಡೂ ಬದಿಗಳಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು, ಸುಮಾರು ಮೂರು ಕಿಲೋಮೀಟರ್ವರೆಗೆ ವಾಹನಗಳ ಸಾಲು ನಿರ್ಮಾಣವಾಗಿತ್ತು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸಂಚಾರ ನಿಯಂತ್ರಿಸುವ ಕಾರ್ಯ ಕೈಗೊಂಡರು. ಬಳಿಕ ಕ್ರೇನ್ ಸಹಾಯದಿಂದ ಕೆಸರಿನಲ್ಲಿ ಸಿಲುಕಿದ್ದ ಲಾರಿಯನ್ನು ಮೇಲಕ್ಕೆತ್ತಿ ತೆರವುಗೊಳಿಸಲಾಯಿತು. ಇದರ ನಂತರ ಹೆದ್ದಾರಿಯಲ್ಲಿ ವಾಹನ ಸಂಚಾರ ಸಹಜ ಸ್ಥಿತಿಗೆ ಮರಳಿತು.
ಮಳೆಗಾಲದಲ್ಲಿ ರಸ್ತೆ ಬದಿಯ ಮಣ್ಣು ಮೆತ್ತಗಾಗಿರುವ ಕಾರಣ, ಭಾರೀ ವಾಹನ ಚಾಲಕರು ಹೆಚ್ಚಿನ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.