ಅಂಜಲಿ ನಿಂಬಾಳ್ಕರ್ ಜನರ ದಾರಿ ತಪ್ಪಿಸುತ್ತಿದ್ದಾರೆ; ರಾಮು ನಾಯ್ಕ
ಯಲ್ಲಾಪುರ: “ದೇಶದ ಗಡಿಗಳನ್ನು ಕಾಯುವ ಜವಾಬ್ದಾರಿ ಕೇಂದ್ರ ಸರಕಾರದ್ದು, ಮೋದಿ, ಅಮಿತ್ ಶಾ ಏನು ಮಾಡುತ್ತಿದ್ದಾರೆ?” ಎಂದು ಕಾರವಾರದ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿರುವವ ಕಾಂಗ್ರೆಸ್ ಪಕ್ಷದ ನೂತನ ಕಾರ್ಯದರ್ಶಿ ಅಂಜಲಿ ನಿಂಬಾಳ್ಕರ್ ತಮ್ಮ ಅಜ್ಞಾನ ಪ್ರದರ್ಶಿಸಿದ್ದಾರೆ. ಕೇವಲ ಹುದ್ದೆ ಇದ್ದರಷ್ಟೇ ಸಾಲದು, ಆ ಹುದ್ದೆಗೆ ತಕ್ಕಂತೆ ಮಾತನಾಡಲು ಸ್ವಲ್ಪ ಇತಿಹಾಸವೂ ಗೊತ್ತಿರಬೇಕು ಎಂದು ಬಿಜೆಪಿ ಮುಖಂಡ ರಾಮು ನಾಯ್ಕ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, 1947 ಭಾರತ-ಪಾಕ್ ವಿಭಜನೆ ಸಂದರ್ಭದಲ್ಲಿ, 1971 ರ ಬಾಂಗ್ಲಾ ವಿಮೋಚನೆ ಸಂದರ್ಭದಲ್ಲಿ, 1991-92ರ ಮ್ಯಾನ್ಮಾರ ದೇಶದ ಸೈನಿಕರ ದೌರ್ಜನ್ಯದ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಭಾರತದ ಒಳಗೆ ನುಸುಳಿದ ಪಾಕಿಸ್ಥಾನ, ಬಾಂಗ್ಲಾ, ಮ್ಯಾನ್ಮಾರಗಳ ಅಕ್ರಮ ವಲಸಿಗರನ್ನು, ರೋಹಿಂಗ್ಯಾಗಳನ್ನು ಆಗಲೇ ತಡೆಯಬೇಕಿದ್ದವರು ಹಾಗೂ ಭಾರತದ ಗಡಿಗಳನ್ನು ಭದ್ರಗೊಳಿಸಿ ಕಾಯಬೇಕಿದ್ದವರು ಯಾರು?
ಆಗ ಆಡಳಿತದಲ್ಲಿದ್ದ ನಿಮ್ಮ ಕಾಂಗ್ರೆಸ್ ಸರಕಾರಗಳೇ ಹೊರತು 2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರಕಾರವಲ್ಲ. ಅಕ್ರಮವಾಗಿ ಪಶ್ಚಿಮ ಬಂಗಾಳದ ಒಳಗೆ ಸೇರಿಕೊಂಡ ವಲಸಿಗರನ್ನು ಹೊರಗೆ ಹಾಕದೇ, ಓಟಿನ ಆಸೆಗಾಗಿ ಅವರಿಗೆ ನಾಗರಿಕ ಸೌಕರ್ಯ ನೀಡಿ, ಮತದಾರರ ಪಟ್ಟಿಯಲ್ಲಿ ಹೆಸರನ್ನೂ ದಾಖಲಿಸಿ, ಸತತವಾಗಿ ಮೂರು ಬಾರಿ ಅಧಿಕಾರಕ್ಕೆ ಬಂದವರೂ ಸಹ ನಿಮ್ಮ ಕಾಂಗ್ರೆಸ್ ಒಕ್ಕೂಟದ ಮಹಾ ನಾಯಕಿ ಮಮತಾ ಬ್ಯಾನರ್ಜಿಯೇ ಹೊರತು ಬಿಜೆಪಿ ಅಲ್ಲ.
ಕಳೆದ ಕೆಲವು ತಿಂಗಳುಗಳಿಂದ ಮತಪಟ್ಟಿ ಪರಿಷ್ಕರಣೆ ಬಗ್ಗೆ, ಮತಚೋರಿ ಹಗರಣಗಳ ಬಗ್ಗೆ, ಪ್ರಧಾನ ಮಂತ್ರಿಗಳ ಛಪ್ಪನ್(56) ಇಂಚಿನ ಎದೆಯ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತಿದ್ದ, ನಿಮ್ಮ ಕಾಂಗ್ರೆಸ್ ಪಕ್ಷದ ಛಪ್ಪನ್ ವರ್ಷದ ಯುವ ನಾಯಕ ರಾಹುಲ್ ಗಾಂಧಿಯವರು ಈ ಅವಧಿಯಲ್ಲಿ ಎಲ್ಲಿದ್ದರು?
ಪ್ರಧಾನ ಮಂತ್ರಿಗಳಿಗೆ ಸರಿಸಮ ಹುದ್ದೆಯಲ್ಲಿರುವ ಈ ವಿರೋಧ ಪಕ್ಷದ ನಾಯಕ, 22 ದಿನಗಳ ಕಾಲ ಯಾರಿಗೂ ಗೊತ್ತಿಲ್ಲದಂತೆ ಯಾವ ದೇಶದಲ್ಲಿದ್ದರು, ಯಾರ ಜೊತೆಯಲ್ಲಿದ್ದರು, ಚೌಕಿದಾರ ಕಹಾಂ ಹೈ? ಎಂದು ಕೇಳುವ ಅಂಜಲಿ ಮೇಡಂ, ರಾಹುಲ್ ಬಾಬಾ ಕಹಾಂ ಥೇ, ಕಿಸಿಕೇ ಸಾಥ ಥೇ, ಕ್ಯಾ ಕರ ರಹೇ ಥೇ ಎನ್ನುವ ಬಗ್ಗೆಯೂ ಒಂದು ಪತ್ರಿಕಾಗೋಷ್ಠಿ ಕರೆದು ಜನರಿಗೆ ಮಾಹಿತಿ ತಿಳಿಸಬೇಕು ಎಂದು ರಾಮು ನಾಯ್ಕ ಕುಟುಕಿದ್ದಾರೆ.