ಕಾರವಾರ: ಆಧುನಿಕ ಯುಗದಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೂ, ಪ್ರತಿಯೊಬ್ಬರೂ ಅಂತರ್ಜಾಲದ ಬಳಕೆ ಮಾಡುತಿದ್ದು, ಇದರಲ್ಲಿ ಮಕ್ಕಳು ಹೆಚ್ಚಿನ ವಂಚನೆಗೆ ಒಳಗಾಗುತ್ತಿದ್ದಾರೆ. ಮೊಬೈಲ್ನಿಂದ ಮಕ್ಕಳನ್ನು ದೂರವಿಡಬೇಕು ಎಂದು ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಅಲ್ಲಾಭಕ್ಷಾ ತಿಳಿಸಿದರು.
ಅವರು ಗುರುವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಪೊಲೀಸ್ ಇಲಾಖೆ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಇವರ ಸಹಯೋಗದಲ್ಲಿ ನಡೆದ ʻವಿಶ್ವ ಸುರಕ್ಷಿತ ಅಂತರ್ಜಾಲ ದಿನʼದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಸುರಕ್ಷಿತ ಅಂತರ್ಜಾಲದ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.
ತಂತ್ರಜ್ಞಾನ ಬೆಳೆದಂತೆ ಅದನ್ನು ಬಳಸುವ ಜನರ ಸಂಖ್ಯೆಯೂ ಹೆಚ್ಚಾಗಿದ್ದು, ಮಕ್ಕಳು ಮೊಬೈಲ್ ಬಳಸುವಾಗ ವಂಚಕರು ಆಸೆ, ಅಮಿಷಗಳನ್ನು ಒಡ್ಡಿ ಕಳುಹಿಸುವ ಸಂದೇಶಗಳನ್ನು ಮಕ್ಕಳು ಅರಿಯದೆ ಲಿಂಕ್ಗಳಿಗೆ ಪ್ರವೇಶ ಮಾಡುವುದರಿಂದ ಹೆಚ್ಚಾಗಿ ವಂಚನೆಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಮಕ್ಕಳ ಕೈಗೆ ಮೊಬೈಲ್ ನೀಡಬೇಡಿ. ಸುರಕ್ಷಿತ ಅಂತರ್ಜಾಲ ಬಗ್ಗೆ ಮಾಹಿತಿ ಪಡೆದ ತಾವುಗಳು ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸಬೇಕು ಎಂದರು.
ಸಿ.ಇ.ಎನ್ ಅಪರಾಧ ಪೊಲೀಸ್ ವಿಭಾಗದ ಡಿವೈಎಸ್ಪಿ ಬಿ.ಅಶ್ವಿನಿ ಮಾತನಾಡಿ, ಅಂಗೈಯಲ್ಲೇ ಜಗತ್ತು ತೋರಿಸುವ ಅಂತರ್ಜಾಲ ಇಂದು ಪ್ರತಿಯೊಬ್ಬರ ಬದುಕನ್ನು ಆವರಿಸಿಕೊಂಡಿದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ, ಜನ ಸಾಮಾನ್ಯನಿಂದ ಹಿಡಿದು ತಜ್ಞರವರೆಗೂ ಅಂತರ್ಜಾಲದ ಬಳಕೆ ವ್ಯಾಪಿಸಿದೆ. ಅಂತರ್ಜಾಲ ಬಳಕೆದಾರರನ್ನು ವಂಚಿಸುವುದಕ್ಕಾಗಿಯೇ ಸಂಘಟಿತ ಅಪರಾಧ ಮಾಡುವ ಜಾಲ ಇಂದು ಜಗತ್ತನ್ನೇ ಆಳುತ್ತಿದೆ. ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಈ ಸೈಬರ್ ವಂಚನೆಯ ಜಾಲಕ್ಕೆ ಒಳಗಾಗುತ್ತಿದ್ದು, ಸರಿಯಾದ ಜ್ಞಾನ-ತಿಳುವಳಿಕೆ ಇಲ್ಲದೇ ನಾವಾಗಿಯೇ ಅಂತರ್ಜಾಲ ಬಳಕೆ ವೇಳೆ ತಪ್ಪುಗಳನ್ನು ಮಾಡಿ ತೊಂದರೆಗೀಡಾಗುತ್ತೇವೆ ಎಂದರು.
ಜಿಲ್ಲಾ ಮಾಹಿತಿ ಕೇಂದ್ರದ ಅಧಿಕಾರಿ ಸಾಯಿ ಸಾಗರ ಜಲ್ಲು ಸುರಕ್ಷಿತ ಅಂತರ್ಜಾಲದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಪ್ರಕಾಶ ಹಲಮ್ಮನವರ, ಮುಖ್ಯ ಯೋಜನಾಧಿಕಾರಿ ಸೋಮಶೇಖರ ಮೇಸ್ತಾ, ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.