ಯಲ್ಲಾಪುರ: ವಿದ್ಯುತ್ ತಂತಿ ತುಂಡಾಗಿ ಮೇಯುತ್ತಿದ್ದ ಎಮ್ಮೆಯೊಂದರ ಮೇಲೆ ಬಿದ್ದ ಪರಿಣಾಮ ಎಮ್ಮೆ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈರಾಪುರ ಗ್ರಾಮದಲ್ಲಿ ನಡೆದಿದೆ.
ಈರಾಪುರದ ಮಂಜುನಾಥ ಮಹಾಬಲೇಶ್ವರ ಭಟ್ (ಗಂಗೆಮನೆ) ಅವರಿಗೆ ಸೇರಿದ ಎಮ್ಮೆಎಂದಿನಂತೆ ಬೆಣದಲ್ಲಿ ಮೇಯುತ್ತಿದ್ದ ವೇಳೆ, ಮೇಲಿಂದ ವಿದ್ಯುತ್ ತಂತಿ ತುಂಡಾಗಿ ಅದರ ಮೇಲೆ ಬಿದ್ದಿದೆ. ತಂತಿಯಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದ ಕಾರಣ ಎಮ್ಮೆ ಸ್ಥಳದಲ್ಲೇ ಮೃತಪಟ್ಟಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪಶುವೈದ್ಯಾಧಿಕಾರಿ ಡಾ. ಕೆ.ಜಿ. ಹೆಗಡೆ, ಹೆಸ್ಕಾಂ ಇಲಾಖೆಯ ಎಸ್ಒ ಲಕ್ಷಣ, ಲೈನ್ಮನ್ಗಳಾದ ಪರಶುರಾಮ ಹಾಗೂ ಮುನ್ನಾ, ಜೊತೆಗೆ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಶುವೈದ್ಯರು ಮೃತ ಜಾನುವಾರಿನ ಮರಣೋತ್ತರ ಪರೀಕ್ಷೆ ನಡೆಸಿದರು.
ಕುಟುಂಬದ ಜೀವನೋಪಾಯಕ್ಕೆ ಆಸರೆಯಾಗಿದ್ದ ಜಾನುವಾರು ವಿದ್ಯುತ್ ಅವಘಡಕ್ಕೆ ಬಲಿಯಾಗಿರುವುದರಿಂದ, ಮಾಲೀಕರಿಗೆ ಸರ್ಕಾರ ಹಾಗೂ ಹೆಸ್ಕಾಂ ಇಲಾಖೆ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.