Monday, September 7, 2026
Join WhatsApp Group
HomeHealthಚೌತಿ ಹಬ್ಬ ಬಂತು; ರುಚಿಯ ಜೊತೆಗೆ ಆರೋಗ್ಯ ಮರೆಯದಿರಿ!

ಚೌತಿ ಹಬ್ಬ ಬಂತು; ರುಚಿಯ ಜೊತೆಗೆ ಆರೋಗ್ಯ ಮರೆಯದಿರಿ!

ಗಣೇಶ ಚೌತಿ ಬಂತೆಂದರೆ ಮನೆಯಲ್ಲಿ ಮೊದಲು ಕೇಳಿಸುವ ಮಾತು ʻಈ ಬಾರಿ ಯಾವ ತಿಂಡಿ ಮಾಡೋಣ?ʼ ಗಣಪತಿಗೆ ನೈವೇದ್ಯಕ್ಕೆ ಸಿಹಿ, ಮನೆಯವರಿಗೆ ಸವಿಯಲು ಚಕ್ಕುಲಿ, ಕೋಡುಬಳೆ, ಕರ್ಜಿಕಾಯಿ, ವಡೆ… ಹೀಗೆ ಅಡುಗೆ ಮನೆಯಲ್ಲೇ ಹಬ್ಬದ ಸಂಭ್ರಮ ಶುರುವಾಗುತ್ತದೆ. ಹಬ್ಬದ ದಿನ ಪೂಜೆ, ಬಂಧು-ಬಳಗದ ಭೇಟಿ ಎಷ್ಟು ಮುಖ್ಯವೋ, ಮನೆಯಲ್ಲೇ ತಯಾರಾದ ತಿಂಡಿಗಳ ರುಚಿಯೂ ಅಷ್ಟೇ ವಿಶೇಷ. ಆದರೆ ಈ ರುಚಿಯ ನಡುವೆ ನಾವು ಸಾಮಾನ್ಯವಾಗಿ ಗಮನಿಸದೆ ಬಿಡುವ ಒಂದು ಸಂಗತಿಯಿದೆ ʻಎಣ್ಣೆʼ!

ಹಬ್ಬದಲ್ಲಿ ಬಹುತೇಕ ತಿಂಡಿಗಳು ಎಣ್ಣೆಯಲ್ಲಿ ಕರಿಯುವಂಥವೇ. ಸಿಕ್ಕ ಎಣ್ಣೆಯಲ್ಲಿ ತಿಂಡಿ ಕರಿದು, ಉಳಿದ ಎಣ್ಣೆಯನ್ನು ಮತ್ತೆ ಮತ್ತೆ ಬಳಸುವುದು ನಮ್ಮ ಮನೆಗಳಲ್ಲಿ ಅಪರೂಪದ ಸಂಗತಿಯೇನಲ್ಲ. ಆದರೆ ಯಾವ ಎಣ್ಣೆಯನ್ನು ಬಳಸುತ್ತೇವೆ, ಎಷ್ಟು ಬಿಸಿ ಮಾಡುತ್ತೇವೆ, ಒಮ್ಮೆ ಬಳಸಿದ ಎಣ್ಣೆಯನ್ನು ಮತ್ತೆ ಬಳಸಬಹುದೇ ಎಂಬ ಬಗ್ಗೆ ಸ್ವಲ್ಪ ಎಚ್ಚರ ವಹಿಸಿದರೆ ಹಬ್ಬದ ರುಚಿಯ ಜೊತೆಗೆ ಆರೋಗ್ಯದ ಕಾಳಜಿಯನ್ನೂ ಕಾಪಾಡಿಕೊಳ್ಳಬಹುದು.

ಚಕ್ಕುಲಿ, ಕೋಡುಬಳೆ, ಕರ್ಜಿಕಾಯಿ, ವಡೆ ಮುಂತಾದ ತಿಂಡಿಗಳನ್ನು ಕರಿಯಲು ಕಡಲೆಕಾಯಿ ಎಣ್ಣೆ, ರೈಸ್ ಬ್ರಾನ್ ಎಣ್ಣೆ, ಸೂರ್ಯಕಾಂತಿ ಎಣ್ಣೆ ಮುಂತಾದವುಗಳನ್ನು ಬಳಸಬಹುದು. ಆದರೆ ಎಣ್ಣೆಯ ಹೆಸರು ಮಾತ್ರ ಮುಖ್ಯವಲ್ಲ. ಅದರ ಗುಣಮಟ್ಟ ಮತ್ತು ಯಾವ ರೀತಿಯ ಅಡುಗೆಗೆ ಅದನ್ನು ಬಳಸುತ್ತಿದ್ದೇವೆ ಎಂಬುದೂ ಮುಖ್ಯ. ಈಗ ಕೋಲ್ಡ್ ಪ್ರೆಸ್ಡ್, ವುಡ್ ಪ್ರೆಸ್ಡ್ ಎಣ್ಣೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ ‘ಕೋಲ್ಡ್ ಪ್ರೆಸ್ಡ್’ ಎಂಬುದು ಎಣ್ಣೆಯನ್ನು ತೆಗೆದ ವಿಧಾನವನ್ನು ಸೂಚಿಸುತ್ತದೆ. ಅದರಿಂದ ಮಾತ್ರ ಅದು ಕರಿಯಲು ಅತ್ಯುತ್ತಮ ಅಥವಾ ಸೂಕ್ತವಲ್ಲ ಎಂದು ನಿರ್ಧರಿಸಲಾಗುವುದಿಲ್ಲ.

ಕೊಬ್ಬರಿ ಎಣ್ಣೆಯ ವಿಷಯದಲ್ಲೂ ಇದೇ ಮಾತು. ಕಡಿಮೆ ಪ್ರಮಾಣದ ತಿಂಡಿಗಳನ್ನು ಕರಿಯಲು ಬಳಸಬಹುದು. ಆದರೆ ಹಬ್ಬದ ಸಂದರ್ಭಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಚಕ್ಕುಲಿ, ಕೋಡುಬಳೆ, ಕರ್ಜಿಕಾಯಿ, ವಡೆ ಮುಂತಾದವುಗಳನ್ನು ಕರಿಯಬೇಕಾದರೆ ಹೆಚ್ಚಿನ ಉರಿಯನ್ನು ತಡೆದುಕೊಳ್ಳುವ ಎಣ್ಣೆಯ ಆಯ್ಕೆ ಮುಖ್ಯ. ವಿಶೇಷವಾಗಿ ವರ್ಜಿನ್ ಅಥವಾ ಕೋಲ್ಡ್ ಪ್ರೆಸ್ಡ್ ಕೊಬ್ಬರಿ ಎಣ್ಣೆಯನ್ನು ತುಂಬಾ ಹೆಚ್ಚಿನ ಉರಿಯಲ್ಲಿ ಬಳಸುವುದು ಸೂಕ್ತವಲ್ಲ.

ಇನ್ನು ಎಣ್ಣೆಯ ಉರಿಯೂ ಬಹಳ ಮುಖ್ಯ. ಎಣ್ಣೆ ಸರಿಯಾಗಿ ಕಾದಿಲ್ಲದಿದ್ದರೆ ತಿಂಡಿ ಹೆಚ್ಚು ಎಣ್ಣೆಯನ್ನು ಹೀರಿಕೊಂಡು ಎಣ್ಣೆ ತುಂಬಿದಂತಾಗುತ್ತದೆ. ಮತ್ತೊಂದೆಡೆ ಎಣ್ಣೆಯನ್ನು ಅತಿಯಾಗಿ ಕಾಯಿಸಿ ಹೊಗೆ ಬರುವ ಹಂತಕ್ಕೆ ತಲುಪಿಸುವುದೂ ಒಳ್ಳೆಯದಲ್ಲ. ಎಣ್ಣೆಯಿಂದ ಹೊಗೆ ಬರಲು ಆರಂಭಿಸಿದರೆ ಅದರ ಗುಣ ಬದಲಾಗಬಹುದು. ಹಾಗೆಯೇ ಒಂದೇ ಬಾರಿಗೆ ತುಂಬಾ ತಿಂಡಿಯನ್ನು ಎಣ್ಣೆಗೆ ಹಾಕಿದರೆ ಉರಿ ಕಡಿಮೆಯಾಗುತ್ತದೆ. ಸ್ವಲ್ಪ ಸ್ವಲ್ಪವಾಗಿ ಹಾಕಿ ಸರಿಯಾದ ಉರಿಯಲ್ಲಿ ಕರಿಯುವುದರಿಂದ ತಿಂಡಿಯ ಗುಣವೂ ಚೆನ್ನಾಗಿರುತ್ತದೆ.

ಹಬ್ಬದ ನಂತರ ಉಳಿಯುವ ಎಣ್ಣೆಯ ವಿಚಾರದಲ್ಲಿ ಇನ್ನಷ್ಟು ಎಚ್ಚರ ಬೇಕು. ಒಂದೇ ಎಣ್ಣೆಯನ್ನು ಹಲವು ದಿನಗಳವರೆಗೆ ಮತ್ತೆ ಮತ್ತೆ ಕಾಯಿಸಿ ಬಳಸುವುದು ಒಳ್ಳೆಯ ಅಭ್ಯಾಸವಲ್ಲ. ಕರಿಯುವಾಗ ಹಿಟ್ಟಿನ ತುಂಡುಗಳು ಮತ್ತು ಆಹಾರದ ಕಣಗಳು ಎಣ್ಣೆಯಲ್ಲಿ ಉಳಿಯುತ್ತವೆ. ಪದೇಪದೇ ಬಿಸಿ ಮಾಡಿದಂತೆ ಎಣ್ಣೆಯ ಗುಣವೂ ಬದಲಾಗುತ್ತದೆ. ಎಣ್ಣೆ ತುಂಬಾ ಕಪ್ಪಾಗಿದ್ದರೆ, ಸುಟ್ಟ ವಾಸನೆ ಬರುತ್ತಿದ್ದರೆ ಅಥವಾ ಕಾಯಿಸುವಾಗ ವಿಪರೀತ ನೊರೆ ಬರುತ್ತಿದ್ದರೆ ಅದನ್ನು ಮತ್ತೆ ಅಡುಗೆಗೆ ಬಳಸಬಾರದು.

ಬಳಸಲಾಗದ ಎಣ್ಣೆಯನ್ನು ಸಿಂಕ್ ಅಥವಾ ಚರಂಡಿಗೆ ಸುರಿಯುವುದೂ ಸರಿಯಲ್ಲ. ತಣ್ಣಗಾದ ಎಣ್ಣೆ ಪೈಪ್‌ಗಳಲ್ಲಿ ಅಂಟಿಕೊಂಡು ಮುಂದೆ ತೊಂದರೆ ಉಂಟುಮಾಡಬಹುದು. ಅದನ್ನು ತಣ್ಣಗಾಗಿಸಿ ಬಾಟಲಿ ಅಥವಾ ಮುಚ್ಚಿದ ಪಾತ್ರೆಯಲ್ಲಿ ಹಾಕಿ ಸೂಕ್ತವಾಗಿ ವಿಲೇವಾರಿ ಮಾಡುವುದು ಉತ್ತಮ.

ಇಷ್ಟದ ತಿಂಡಿ ಸಿಕ್ಕಿದೆ ಎಂದು ಸಿಕ್ಕಾಪಟ್ಟೆ ತಿನ್ನುವ ಬದಲು, ಎಲ್ಲ ತಿಂಡಿಗಳನ್ನೂ ಸ್ವಲ್ಪ ಸ್ವಲ್ಪ ಸವಿಯಬಹುದು. ಕರಿದ ತಿಂಡಿ ತಿಂದ ದಿನ ತರಕಾರಿ, ಸೊಪ್ಪು, ಬೇಳೆ, ಹಣ್ಣುಗಳಿಗೆ ಜಾಗ ನೀಡುವುದೂ ಒಳ್ಳೆಯದು. ಸಾಕಷ್ಟು ನೀರು ಕುಡಿಯುವುದು ಮತ್ತು ತುಂಬಾ ಕರಿದ ತಿಂಡಿಗಳನ್ನು ತಿಂದ ತಕ್ಷಣ ಮಲಗದೆ ಸ್ವಲ್ಪ ಓಡಾಡುವುದೂ ಸಹಾಯ ಮಾಡುತ್ತದೆ.

ಹಬ್ಬವೆಂದರೆ ರುಚಿಯನ್ನು ಬಿಟ್ಟುಬಿಡುವುದಲ್ಲ. ನಮ್ಮ ಸಂಪ್ರದಾಯದ ಅಡುಗೆ, ಮನೆಯ ತಿಂಡಿ, ಬಂಧು-ಬಳಗದ ಜೊತೆಗಿನ ಸಂತೋಷ ಇವೆಲ್ಲವೂ ಹಬ್ಬದ ಭಾಗವೇ. ಆದರೆ ಎಣ್ಣೆಯನ್ನು ಸರಿಯಾಗಿ ಆಯ್ಕೆ ಮಾಡಿ, ಅತಿಯಾಗಿ ಕಾಯಿಸದೆ, ಬಳಸಿದ ಎಣ್ಣೆಯನ್ನು ಮತ್ತೆ ಮತ್ತೆ ಬಳಸದೆ, ತಿಂಡಿಗಳನ್ನು ಮಿತವಾಗಿ ಸವಿದರೆ ಸಾಕು.

ಹಬ್ಬದ ತಟ್ಟೆಯಲ್ಲಿ ರುಚಿ ಇರಲಿ…
ಆದರೆ ಆ ರುಚಿಯ ಹಿಂದೆ ಆರೋಗ್ಯವನ್ನು ಮರೆಯದಿರಿ!

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share