ಯಲ್ಲಾಪುರ/ಅಂಕೋಲಾ: ತಾಲೂಕಿನ ಗಡಿ ಭಾಗವಾದ ಹೆಗ್ಗಾರ-ಗುಳ್ಳಾಪುರ ಸೆತುವೆ ಬಳಿ ಗಂಗಾವಳಿ ನದಿಯಲ್ಲಿ ಸ್ವರ್ಣವಲ್ಲೀ ಶ್ರೀಗಳ ಸೂಚನೆಯಂತೆ ಶಿವರಾತ್ರಿಯ ದಿನವಾದ ರವಿವಾರ ಸಂಜೆ ಗಂಗಾಪೂಜೆ, ಗಂಗಾರತಿ ಕಾರ್ಯಕ್ರಮ ನೆರವೇರಿತು.
ಶ್ರೀಮಠದ ವ್ಯಾಪ್ತಿಯ ಕುಳಿನಾಡು ಹಾಗೂ ಚಿನ್ನಾಪುರ ಸೀಮೆಯ ಗಂಗಾವಳಿ ನದಿ ತಟದ ಅಕ್ಕ-ಪಕ್ಕದ ಗ್ರಾಮಗಳ ಸಮಸ್ತ ನಾಗರಿಕರು ಗಂಗಾರತಿ ಹಾಗೂ ಗಂಗಾಪೂಜೆಯಲ್ಲಿ ಭಾಗವಹಿಸಿದ್ದರು. ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಅವರು ಗಂಗಾಪೂಜೆಯಲ್ಲಿ ಭಾಗವಹಿಸಿ, ನಮ್ಮ ನದಿ, ನಮ್ಮ ನೀರನ್ನು ನಾವು ರಕ್ಷಿಸಿಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.
ವೇ. ಗಣಪತಿ ಭಟ್ಟ ಅರಬೈಲ್ ನದೀ ಪೂಜೆ ನೆರವೇರಿಸಿದರು. ನಮ್ಮ ನದಿ, ನಮ್ಮ ನೀರು ನಮ್ಮದಾಗಿಯೇ ಉಳಿಯಲಿ, ಗಂಗಾವಳಿ- ಬೇಡ್ತಿ ನದಿಗೆ, ನದಿ ಹರಿವಿಗೆ ಯಾವುದೇ ಕಂಟಕ ಬಾರದೇ ಇರಲಿ ಎಂದು ಗಂಗಾ ಮಾತೆಯಲ್ಲಿ ಪ್ರಾರ್ಥಿಸಿಕೊಂಡರು.
ಶಾಸಕ ಶಿವರಾಮ ಹೆಬ್ಬಾರ ದಂಪತಿಗಳು ಗಂಗಾ ಆರತಿ ನೆರವೇರಿಸಿ, ಬಾಗಿನ ಅರ್ಪಿಸಿದರು. ಸ್ಥಳೀಯ ಪ್ರಮುಖರಾದ ನಾಗಪತಿ ಹೆಗಡೆ ಕಾಗೇರಿ, ಶ್ರೀಕಾಂತ ಶೆಟ್ಟಿ,, ಆರ್.ಸಿ. ಹೆಗಡೆ, ಮಾಚಣ್ಣ ಗುಳ್ಳಾಪುರ, ನಾರಾಯಣ ಭಟ್ಟ ಬಟ್ಲಗುಂಡಿ, ಗಿರೀಶ ಭಟ್ಟ ಕೋನಾಳ, ಸದಾನಂದ ಭಟ್ಟ ಹಲವಳ್ಳಿ, ವಿ.ಎನ್. ಭಟ್ಟ ಹೆಗ್ಗಾರ್, ನಾರಾಯಣ ಜಾಯಿಕಾಯಿಮನೆ, ಸುಧಾಕರ ಗುಡ್ಡೆ, ಆನಂದ್ ನಾಯ್ಕ, ಸತೀಶ್ ನಾಯ್ಕ, ದತ್ತಾತ್ರಯ ಹೆಗಡೆ ಕಣ್ಣಿಪಾಲ್, ರಾಜೇಶ್ ಹೆಗಡೆ ಕೈಗಡಿ, ರಾಘವೇಂದ್ರ ಶೆಟ್ಟಿ, ಜಿ.ಆರ್ .ಭಟ್ಟ ಗುಳ್ಳಾಪುರ, ಪುಟ್ಟು ಕನಕನಹಳ್ಳಿ, ಶಿವರಾಮ ಗಾಂವ್ಕಾರ್ ಕನಕನಹಳ್ಳಿ ಉಪಸ್ಥಿತರಿದ್ದರು. ಅರಬೈಲ್, ಗುಳ್ಳಾಪುರ, ಕೊಡ್ಲಗದ್ದೆ, ಹೆಗ್ಗಾರ, ಹಳವಳ್ಳಿ, ಶೇವಕಾರ, ಕೈಗಡಿ, ಕಲ್ಲೇಶ್ವರ ಭಾಗದ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.