ಕೆನರಾ ನೆಕ್ಸ್ಟ್ ನ್ಯೂಸ್ ಡೆಸ್ಕ್
ಗೋಕರ್ಣ: ಹಾರುಮಾಸ್ಕೇರಿ ಗ್ರಾಮದ ಶ್ರೀ ಗಣಪತಿ ದೇವಸ್ಥಾನದಲ್ಲಿ ಇರಿಸಲಾಗಿದ್ದ ತಾಮ್ರ ಹಾಗೂ ಹಿತ್ತಾಳೆಯ ಪೂಜಾ ಸಾಮಗ್ರಿಗಳನ್ನು ಕಳ್ಳರು ಕದ್ದೊಯ್ದಿರುವ ಘಟನೆ ವರದಿಯಾಗಿದೆ.
ಈ ಕುರಿತು ದೇವಸ್ಥಾನದ ಅರ್ಚಕರಾದ ದತ್ತಾತ್ರಯ ಸುಬ್ರಾಯ ಭಟ್ ಅವರು ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಪ್ರಕಾರ, ಏಪ್ರಿಲ್ 20ರಂದು ಬೆಳಿಗ್ಗೆ 8.30ರಿಂದ 11 ಗಂಟೆಯ ನಡುವಿನ ಅವಧಿಯಲ್ಲಿ ದೇವಸ್ಥಾನದ ಗರ್ಭಗುಡಿಯ ಎದುರು ಪ್ಲಾಸ್ಟಿಕ್ ಬುಟ್ಟಿಯಲ್ಲಿ ಇಡಲಾಗಿದ್ದ ತಾಮ್ರದ ಕೊಡ, ತಾಮ್ರದ ಚಂಬು ಹಾಗೂ ಹಿತ್ತಾಳೆಯ ನಂದಾದೀಪವನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ಕಳುವಾದ ವಸ್ತುಗಳ ಪೈಕಿ ತಾಮ್ರದ ಕೊಡದ ಅಂದಾಜು ಮೌಲ್ಯ 6 ಸಾವಿರ ರೂ, ತಾಮ್ರದ ಚಂಬಿನ ಮೌಲ್ಯ 500 ರೂ ಹಾಗೂ ಹಿತ್ತಾಳೆಯ ನಂದಾದೀಪದ ಮೌಲ್ಯ 6 ಸಾವಿರ ರೂ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಒಟ್ಟು 12,500 ರೂ ಮೌಲ್ಯದ ವಸ್ತುಗಳು ಕಳುವಾಗಿವೆ.
ಈ ಸಂಬಂಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತರ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.