Ad
Ad
Ad
Home Local News ಕಂಟಕವಾಗಿದ್ದ ರಸ್ತೆ ಹೊಂಡ; ಗುಂಡಿ ಮುಚ್ಚಿದ ಆರ್‌ಎಸ್‌ಎಸ್‌ ತಂಡ

ಕಂಟಕವಾಗಿದ್ದ ರಸ್ತೆ ಹೊಂಡ; ಗುಂಡಿ ಮುಚ್ಚಿದ ಆರ್‌ಎಸ್‌ಎಸ್‌ ತಂಡ

0
4

ಬನವಾಸಿ: ರಸ್ತೆ ಮೇಲೆ ಗುಂಡಿ ಬಿದ್ದರೆ ದೂರು ನೀಡುವುದು, ಅಧಿಕಾರಿಗಳತ್ತ ಬೆರಳು ತೋರಿಸುವುದು ಸಾಮಾನ್ಯ. ಆದರೆ ಇಲ್ಲಿ ಗುಂಡಿಗಳೇ ಜನರ ಜೀವಕ್ಕೆ ಅಪಾಯ ತಂದೊಡ್ಡುತ್ತಿದ್ದಾಗ, ‘ಯಾರಾದರೂ ಬಂದು ಮಾಡಲಿ’ ಎಂದು ಕಾಯದೆ ಸ್ಥಳೀಯ ಕಾರ್ಯಕರ್ತರೇ ಕೈಯಲ್ಲಿ ಸಲಕರಣೆ ಹಿಡಿದು ರಸ್ತೆಗೆ ಇಳಿದಿದ್ದಾರೆ. ಪರಿಣಾಮ, ವಾಹನ ಸವಾರರಿಗೆ ಕಿರಿಕಿರಿ ತಂದಿದ್ದ ರಾಜ್ಯ ಹೆದ್ದಾರಿಯ ಹಲವು ಗುಂಡಿಗಳಿಗೆ ತಾತ್ಕಾಲಿಕ ಪರಿಹಾರ ದೊರೆತಿದೆ.

ನವಲಗುಂದ–ಮೂಡದಿವಳಿಗೆ ರಾಜ್ಯ ಹೆದ್ದಾರಿಯ ಬನವಾಸಿಯಿಂದ ಮೊಗವಳ್ಳಿಯ ವರದಾ ಸೇತುವೆವರೆಗಿನ ವಿವಿಧ ಭಾಗಗಳಲ್ಲಿ ರಸ್ತೆ ಹದಗೆಟ್ಟು ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದವು. ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುತ್ತಿದ್ದರಿಂದ ಅವು ರಸ್ತೆಯಲ್ಲಿರುವುದು ತಿಳಿಯದೆ ವಾಹನ ಸವಾರರು ಸಂಚರಿಸುವ ಪರಿಸ್ಥಿತಿ ಎದುರಾಗಿತ್ತು. ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಈ ಗುಂಡಿಗಳು ಅಪಾಯಕಾರಿಯಾಗಿ ಪರಿಣಮಿಸಿದ್ದವು.

ಈ ಸಮಸ್ಯೆಯನ್ನು ಗಮನಿಸಿದ ಸಮೀಪದ ಭಾಶಿ ಗ್ರಾಮದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಭಾನುವಾರ ಸ್ವಯಂಪ್ರೇರಿತರಾಗಿ ಶ್ರಮದಾನಕ್ಕೆ ಮುಂದಾದರು. ಗುತ್ತಿಗೆದಾರ ಗುಣಶೇಖರ ಪಿಳೈ ಅವರ ಸಹಕಾರದೊಂದಿಗೆ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಕೈಗೊಂಡ ಅವರು, ಜಲ್ಲಿ ಹಾಗೂ ಎಂ-ಸ್ಯಾಂಡ್‌ ಮಿಶ್ರಿತ ಸಾಮಗ್ರಿಗಳನ್ನು ಬಳಸಿ ಹದಗೆಟ್ಟಿರುವ ಭಾಗಗಳನ್ನು ಸರಿಪಡಿಸಿದರು.

ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕೆ ಮಾತ್ರ ಸೀಮಿತವಾಗದೆ, ರಸ್ತೆ ಬದಿಯಲ್ಲಿ ಬೆಳೆದಿದ್ದ ಗಿಡಗಂಟೆಗಳನ್ನೂ ತೆರವುಗೊಳಿಸಲಾಯಿತು. ಇದರಿಂದ ವಾಹನ ಸವಾರರಿಗೆ ರಸ್ತೆ ಸ್ಪಷ್ಟವಾಗಿ ಕಾಣುವಂತಾಗಿದ್ದು, ಸಂಚಾರಕ್ಕೂ ಕೊಂಚ ಅನುಕೂಲ ಕಲ್ಪಿಸಿದಂತಾಗಿದೆ.

ಬೆಳಗ್ಗೆಯಿಂದಲೇ ಕಾರ್ಯಕರ್ತರು ಶ್ರಮದಾನದಲ್ಲಿ ತೊಡಗಿಸಿಕೊಂಡಿದ್ದು, ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿದ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಆದರೆ ಈ ಶ್ರಮದಾನ ಶಾಶ್ವತ ರಸ್ತೆ ದುರಸ್ತಿಗೆ ಪರ್ಯಾಯವಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ. ರಾಜ್ಯ ಹೆದ್ದಾರಿಯಂತಹ ಪ್ರಮುಖ ರಸ್ತೆಯಲ್ಲಿ ಪದೇಪದೆ ಗುಂಡಿಗಳು ಕಾಣಿಸಿಕೊಳ್ಳುತ್ತಿರುವುದರಿಂದ ಸಂಬಂಧಪಟ್ಟ ಇಲಾಖೆ ಗುಣಮಟ್ಟದ ಕಾಮಗಾರಿ ನಡೆಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

ಸಾರ್ವಜನಿಕರ ಸಮಸ್ಯೆ ಎದುರಾದಾಗ ಅದು ಯಾರೊಬ್ಬರದ್ದಲ್ಲ, ಇಡೀ ಸಮಾಜದ ಸಮಸ್ಯೆ ಎಂಬ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಇಲಾಖೆಗಳು ತಮ್ಮ ಜವಾಬ್ದಾರಿ ನಿರ್ವಹಿಸುವುದರ ಜೊತೆಗೆ, ನಾಗರಿಕರೂ ತಮ್ಮ ಕೈಲಾದ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳಿಗೆ ಮುಂದಾದರೆ ಹಲವು ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂಬುದಕ್ಕೆ ಭಾಶಿ ಗ್ರಾಮದ ಈ ಶ್ರಮದಾನ ಒಂದು ಉದಾಹರಣೆಯಾಗಿದೆ.

Previous articleಇವರಿಗೆ ನೀರು ಹಾವಿನ ಮೇಲೂ ಅಕ್ಕರೆ!
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!