ಕಾರವಾರ: ಕೋಡಿಬಾಗದ ಸಂತೋಷಿಮಾತಾ ದೇವಸ್ಥಾನದ ಪಕ್ಕದಲ್ಲಿರುವ ಕಾಳಿ ನದಿಯಲ್ಲಿ ಕಾಂಡ್ಲಾ ಸಸಿಗಳ ನಡುವೆ ಸಿಲುಕಿದ್ದ ಸುಮಾರು 130 ಕೆಜಿ ತೂಕದ ಹಸಿರು ಕಡಲಾಮೆಯನ್ನು (Green Sea Turtle) ಗುರುವಾರ ಯಶಸ್ವಿಯಾಗಿ ರಕ್ಷಿಸಲಾಯಿತು. ಮೀನುಗಾರರು ಮೊದಲಿಗೆ ಆಮೆಯನ್ನು ಗಮನಿಸಿ ತಕ್ಷಣವೇ ಕಡಲಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಮಾಹಿತಿ ನೀಡಿದರು. ಕೇಂದ್ರದ ತಜ್ಞರು ಹಾಗೂ ಅರಣ್ಯ ಇಲಾಖೆಯ ಕೋಸ್ಟಲ್ ಮೆರೈನ್ ವಿಭಾಗದ ಸಿಬ್ಬಂದಿ ಸೇರಿ ಕಾರ್ಯಾಚರಣೆ ನಡೆಸಿ ಆಮೆಯನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
ʻಹಸಿರು ಕಡಲಾಮೆ ಪಶ್ಚಿಮ ಕರಾವಳಿಯ ಅಳಿವೆ ಪ್ರದೇಶದಲ್ಲಿ ಕಾಣಸಿಗುವುದು ಅಪರೂಪ. ಸಮುದ್ರದ ಉಬ್ಬರದ ಸಮಯದಲ್ಲಿ ಅಳಿವೆಗೆ ಬಂದಿದ್ದ ಆಮೆ, ಇಳಿತದ ನಂತರ ಸಮುದ್ರಕ್ಕೆ ಮರಳಲಾಗದೆ ಕಾಂಡ್ಲಾ ಸಸಿಗಳ ನಡುವೆ ಸಿಲುಕಿರುವ ಸಾಧ್ಯತೆ ಇದೆʼ ಎಂದು ಕಡಲಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಶಿವಕುಮಾರ ಹರಗಿ ವಿವರಿಸಿದರು.
ಪ್ರಸ್ತುತ ಆಮೆಯನ್ನು ಅರಣ್ಯ ಇಲಾಖೆಯ ಸುಪರ್ದಿಯಲ್ಲಿ ಇರಿಸಲಾಗಿದೆ. ಕೋಸ್ಟಲ್ ಮೆರೈನ್ ವಿಭಾಗದ ಆರ್ಎಫ್ಒ ಕಿರಣ್ ಮನವಾಚಾರಿ ಅವರ ಪ್ರಕಾರ, ಕಡಲಾಮೆಗಳ ಚಿಕಿತ್ಸೆ ಕುರಿತು ಪರಿಣತಿ ಹೊಂದಿರುವ ತಜ್ಞರು ಕುಂದಾಪುರದಿಂದ ಆಗಮಿಸಿ ಆರೋಗ್ಯ ತಪಾಸಣೆ ಮತ್ತು ಅಗತ್ಯ ಚಿಕಿತ್ಸೆ ನೀಡಲಿದ್ದಾರೆ. ಚಿಕಿತ್ಸೆ ಪೂರ್ಣಗೊಂಡ ಬಳಿಕ ಆಮೆಯನ್ನು ಸಮುದ್ರಕ್ಕೆ ಮರುಬಿಡಲಾಗುವುದು ಎಂದು ತಿಳಿಸಿದ್ದಾರೆ.
ಪರಿಸರ ತಜ್ಞರ ಅಭಿಪ್ರಾಯದಲ್ಲಿ, ಇಂತಹ ವಿರಳ ಪ್ರಾಣಿಗಳ ರಕ್ಷಣೆ ಕರಾವಳಿ ಜೀವವೈವಿಧ್ಯ ಸಂರಕ್ಷಣೆಗೆ ಮಹತ್ವದ್ದಾಗಿದೆ. ಸ್ಥಳೀಯ ಮೀನುಗಾರರ ಜಾಗೃತಿಯೇ ಈ ಜೀವ ಉಳಿಯಲು ಕಾರಣವಾಗಿದೆ ಎಂಬುದು ವಿಶೇಷ.