Ad
Home State ರಂಗೋಲಿಯಲ್ಲಿ ಅರಳಿದ ಸಿಎಂ; 20 ಅಡಿ ಕಲಾಕೃತಿಯಲ್ಲಿ ಮೂಡಲಿದೆ ತುಳುನಾಡಿನ ಸೊಗಡು!

ರಂಗೋಲಿಯಲ್ಲಿ ಅರಳಿದ ಸಿಎಂ; 20 ಅಡಿ ಕಲಾಕೃತಿಯಲ್ಲಿ ಮೂಡಲಿದೆ ತುಳುನಾಡಿನ ಸೊಗಡು!

0
6

ಮಂಗಳೂರು: ನೆಲದ ಮೇಲೆ ಬಣ್ಣಗಳನ್ನು ಚೆಲ್ಲಿ ಚಿತ್ರ ಬಿಡಿಸುವುದು ರಂಗೋಲಿ. ಆದರೆ ಆ ಬಣ್ಣಗಳಿಗೆ ಜೀವ ತುಂಬಿ, ನೋಡುಗರ ಕಣ್ಣು ಕೆಲಕ್ಷಣ ಅಲ್ಲೇ ನಿಲ್ಲುವಂತೆ ಮಾಡುವುದು ಅಷ್ಟು ಸುಲಭದ ಕಲೆಯಲ್ಲ. ಮಂಗಳೂರಿನ ರಂಗೋಲಿ ಕಲಾವಿದೆ ವೀಣಾ ಐತಾಳ್ ಅವರ ಕೈಚಳಕದಲ್ಲಿ ಇದೇ ಕಲೆ ಮತ್ತೊಂದು ಎತ್ತರಕ್ಕೆ ಏರುತ್ತಿದೆ.

 ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಅವರ ಕಲಾತ್ಮಕ ಭಾವಚಿತ್ರವನ್ನೇ ರಂಗೋಲಿಯಲ್ಲಿ ಮೂಡಿಸುವ ಮೂಲಕ ವೀಣಾ ಐತಾಳ್ ಗಮನ ಸೆಳೆದಿದ್ದಾರೆ.

ಮುಖ್ಯಮಂತ್ರಿಯವರು ಮಂಗಳೂರಿನಲ್ಲಿ ಅಧಿವೇಶನ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ, ವೀಣಾ ಐತಾಳ್ ಅವರು ತಮ್ಮದೇ ಶೈಲಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಂಗೋಲಿ ಕಲಾಕೃತಿಯನ್ನು ಸಿದ್ಧಪಡಿಸಿದ್ದಾರೆ. ಈ ಕಲಾಕೃತಿಯ ಛಾಯಾಚಿತ್ರವನ್ನು ಚೌಕಟ್ಟಿನಲ್ಲಿ ಅಳವಡಿಸಿ, ನಾಡಿದ್ದು ಮುಖ್ಯಮಂತ್ರಿಯವರಿಗೆ ಉಡುಗೊರೆಯಾಗಿ ನೀಡಲು ಸಿದ್ಧತೆ ನಡೆಸಿದ್ದಾರೆ.

ಇಷ್ಟಕ್ಕೇ ವೀಣಾ ಐತಾಳ್ ಅವರ ಕಲಾ ಪ್ರದರ್ಶನ ಮುಗಿಯುವುದಿಲ್ಲ. ಮುಖ್ಯಮಂತ್ರಿ ಅವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬರೋಬ್ಬರಿ 20 ಅಡಿ ಉದ್ದ-ಅಗಲದ ಎರಡು ಬೃಹತ್ ರಂಗೋಲಿ ಕಲಾಕೃತಿಗಳು ಮೂಡಲಿವೆ. ಈಗಾಗಲೇ ಇಂದಿನಿಂದಲೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಕಲಾಕೃತಿಗಳ ರಚನೆ ಆರಂಭವಾಗಿದೆ.

ಈ ಬೃಹತ್ ರಂಗೋಲಿಗಳಲ್ಲಿ ತುಳುನಾಡಿನ ಸಾಂಸ್ಕೃತಿಕ ವೈಭವವೂ ಬಣ್ಣಗಳ ಮೂಲಕ ಅನಾವರಣಗೊಳ್ಳಲಿದೆ. ತುಳುನಾಡಿನ ಜನಪದ ಬದುಕಿನೊಂದಿಗೆ ಬೆಸೆದುಕೊಂಡಿರುವ ಯಕ್ಷಗಾನ ಮತ್ತು ಕಂಬಳದ ವಿನ್ಯಾಸಗಳು ಈ ಕಲಾಕೃತಿಗಳ ಪ್ರಮುಖ ಆಕರ್ಷಣೆಯಾಗಲಿವೆ. ಹೀಗಾಗಿ ಮುಖ್ಯಮಂತ್ರಿ ಅವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮೂಡುತ್ತಿರುವ ಈ ರಂಗೋಲಿ ಕೇವಲ ಅಲಂಕಾರವಾಗಿರದೆ, ಕರಾವಳಿಯ ಸಂಸ್ಕೃತಿಯನ್ನೂ ಪರಿಚಯಿಸುವ ಕಲಾ ಪ್ರದರ್ಶನವಾಗಲಿದೆ.

ವೀಣಾ ಐತಾಳ್ ಅವರ ರಂಗೋಲಿಗೆ ತನ್ನದೇ ಆದ ವಿಶೇಷತೆಯಿದೆ. ಸಾಮಾನ್ಯವಾಗಿ ರಂಗೋಲಿಯಲ್ಲಿ ಬಣ್ಣಗಳ ಬಳಕೆ ಮುಖ್ಯವಾದರೂ, ಅವರು ಕಡು ಮತ್ತು ತಿಳಿ ಬಣ್ಣಗಳನ್ನು ಸೂಕ್ಷ್ಮವಾಗಿ ಮಿಶ್ರಣ ಮಾಡಿ ಚಿತ್ರಕ್ಕೆ ಆಳ, ನೆರಳು ಮತ್ತು ಸಹಜ ಭಾವವನ್ನು ತರುವಲ್ಲಿ ಪರಿಣತಿ ಹೊಂದಿದ್ದಾರೆ. ಅದಕ್ಕಾಗಿಯೇ ಅವರ ರಂಗೋಲಿಯನ್ನು ನೋಡಿದಾಗ ಅದು ಕೇವಲ ನೆಲದ ಮೇಲಿನ ಬಣ್ಣದ ವಿನ್ಯಾಸವಾಗಿ ಕಾಣದೆ, ಜೀವಂತ ಚಿತ್ರವೊಂದರಂತೆ ಭಾಸವಾಗುತ್ತದೆ.

ಈಗಾಗಲೇ ವಿವಿಧೆಡೆ ಹಲವು ರಂಗೋಲಿ ಕಲಾಕೃತಿಗಳನ್ನು ರಚಿಸಿರುವ ವೀಣಾ ಐತಾಳ್ ಅವರಿಗೆ, ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೂಡಿಸಲಿರುವ ಈ ಬೃಹತ್ ಕಲಾಕೃತಿಗಳು ಮತ್ತೊಂದು ವಿಶೇಷ ಅವಕಾಶ. ಒಂದೆಡೆ ಮುಖ್ಯಮಂತ್ರಿಯವರ ಭಾವಚಿತ್ರ, ಮತ್ತೊಂದೆಡೆ ಯಕ್ಷಗಾನ ಮತ್ತು ಕಂಬಳದ ಮೂಲಕ ತುಳುನಾಡಿನ ಸಾಂಸ್ಕೃತಿಕ ವೈಭವ ಇವೆರಡೂ ಬಣ್ಣಗಳ ಲೋಕದಲ್ಲಿ ಒಂದಾಗಲಿವೆ.

ಮುಖ್ಯಮಂತ್ರಿಯವರ ಮಂಗಳೂರು ಪ್ರವಾಸಕ್ಕೆ ಬಣ್ಣದ ಸ್ವಾಗತ ನೀಡುವುದರ ಜೊತೆಗೆ, ಕರಾವಳಿಯ ಕಲೆ, ಸಂಸ್ಕೃತಿ ಮತ್ತು ಜನಪದ ಪರಂಪರೆಯನ್ನು ರಂಗೋಲಿಯ ಮೂಲಕ ಪರಿಚಯಿಸುವ ಪ್ರಯತ್ನವೂ ಇದಾಗಲಿದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!