ಅಂಕೋಲಾ: ಹಿರಿಯ ವಕೀಲರು ಹಾಗೂ ಸಮಾಜಮುಖಿ ವ್ಯಕ್ತಿತ್ವದ ಶ್ರೀ ಸುಭಾಷ್ ನಾರ್ವೇಕರ ಅವರ ನಿಧನಕ್ಕೆ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಹಾಗೂ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಶಾಸಕಿ ರೂಪಾಲಿ ಸಂತೋಷ ನಾಯ್ಕ ಹಾಗೂ ಯಲ್ಲಾಪುರ-ಮುಂಡಗೋಡ-ಬನವಾಸಿ ಶಾಸಕ ಶಿವರಾಮ ಹೆಬ್ಬಾರ್ ಅವರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಶ್ರೀ ಸುಭಾಷ್ ನಾರ್ವೇಕರ ಅವರ ನಿಧನದ ಸುದ್ದಿ ತೀವ್ರ ಆಘಾತ ತಂದಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ವಕೀಲಿ ವೃತ್ತಿಯಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ಅವರು ಸಮಾಜಮುಖಿ ಕಾರ್ಯಗಳಲ್ಲಿಯೂ ಸದಾ ಸಕ್ರಿಯರಾಗಿದ್ದರು. ಸರಳತೆ, ಸ್ನೇಹಪರ ವ್ಯಕ್ತಿತ್ವ ಹಾಗೂ ಮಾನವೀಯ ಮೌಲ್ಯಗಳಿಂದ ಎಲ್ಲರ ಪ್ರೀತಿ ಮತ್ತು ವಿಶ್ವಾಸ ಗಳಿಸಿದ್ದ ಅವರು ಜನಾನುರಾಗಿಯಾಗಿದ್ದರು. ಜನರೊಂದಿಗೆ ಅವರು ಹೊಂದಿದ್ದ ಆತ್ಮೀಯ ಬಾಂಧವ್ಯ ಎಂದಿಗೂ ಮರೆಯಲಾಗದು. ಅವರ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಕಾಗೇರಿ ಸಂತಾಪ ಸೂಚಿಸಿದ್ದಾರೆ.
ರೂಪಾಲಿ ಸಂತೋಷ ನಾಯ್ಕ ಅವರು, ಅಂಕೋಲಾ ತಾಲೂಕಿನ ಖ್ಯಾತ ಹಿರಿಯ ವಕೀಲರಾಗಿದ್ದ ಸುಭಾಷ್ ನಾರ್ವೇಕರ ಅವರು ತಮ್ಮ ಆತ್ಮೀಯರು ಹಾಗೂ ಮಾರ್ಗದರ್ಶಕರಾಗಿದ್ದರು ಎಂದು ಸ್ಮರಿಸಿದ್ದಾರೆ. ಅವರ ನಿಧನದ ಸುದ್ದಿ ಆಘಾತ ತಂದಿದ್ದು, ದಿವ್ಯಾತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಹಾಗೂ ಕುಟುಂಬಸ್ಥರು ಮತ್ತು ಬಂಧು-ಬಳಗದವರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಶಾಸಕ ಶಿವರಾಮ ಹೆಬ್ಬಾರ್ ಅವರು ಸುಭಾಷ್ ನಾರ್ವೇಕರ ಅವರನ್ನು ತಮ್ಮ ಅತ್ಯಂತ ಆತ್ಮೀಯ ಸ್ನೇಹಿತ ಹಾಗೂ ಅಜಾತಶತ್ರು ವ್ಯಕ್ತಿತ್ವದವರಾಗಿ ಸ್ಮರಿಸಿದ್ದಾರೆ. ವಕೀಲ ವೃತ್ತಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ನಾರ್ವೇಕರ ಅವರು ಸಮಾಜಮುಖಿ ಕಾರ್ಯಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸರಳತೆ, ಸ್ನೇಹಪರತೆ ಹಾಗೂ ಮಾನವೀಯ ಗುಣಗಳಿಂದ ಎಲ್ಲರ ಮನದಲ್ಲೂ ವಿಶೇಷ ಸ್ಥಾನ ಪಡೆದಿದ್ದರು. ಅವರ ಅಗಲಿಕೆ ವೈಯಕ್ತಿಕವಾಗಿ ತಮಗೆ ತುಂಬಲಾರದ ನಷ್ಟವಾಗಿದ್ದು, ಕುಟುಂಬಕ್ಕೆ ಮಾತ್ರವಲ್ಲದೆ ವಕೀಲ ಸಮುದಾಯ ಹಾಗೂ ಸಮಾಜಕ್ಕೂ ಭರಿಸಲಾಗದ ನಷ್ಟವಾಗಿದೆ ಎಂದು ಹೆಬ್ಬಾರ್ ತಿಳಿಸಿದ್ದಾರೆ.
ದಿವಂಗತ ಸುಭಾಷ್ ನಾರ್ವೇಕರ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ಕುಟುಂಬಸ್ಥರು, ಬಂಧು-ಬಳಗ ಮತ್ತು ಆತ್ಮೀಯರಿಗೆ ಈ ದುಃಖವನ್ನು ಭರಿಸುವ ಶಕ್ತಿ ಮತ್ತು ಧೈರ್ಯ ದೊರೆಯಲಿ ಎಂದು ಮೂವರೂ ಸಂತಾಪ ವ್ಯಕ್ತಪಡಿಸಿದ್ದಾರೆ.