ಬನವಾಸಿ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಜಮೀನು ವಿಚಾರವಾಗಿ ಸಹೋದರರ ನಡುವೆ ಗಲಾಟೆ ನಡೆದಿದ್ದು, ಈ ಸಂಬಂಧ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ.19ರಂದು ರಾತ್ರಿ ರಂಗಾಪುರ ಗ್ರಾಮದ ಮೇಲಿನಕೇರಿಯಿಂದ ಮಾರುತಿ ದೇವಸ್ಥಾನದ ಕಡೆ ಗಣೇಶ ವಿಸರ್ಜನೆ ಮೆರವಣಿಗೆ ಸಾಗುತ್ತಿದ್ದ ವೇಳೆ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮೆರವಣಿಗೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮೋಹನ ಶಿಳ್ಳೇರ ಅವರನ್ನು ಅವರ ಅಣ್ಣ ಬಸವರಾಜ ಯತ್ರಾಯಪ್ಪ ಶಿಳ್ಳೇರ ಅವರು ತಡೆದು, ಅವಾಚ್ಯ ಶಬ್ದಗಳಿಂದ ಬೈದು ಜಮೀನನ್ನು ತನಗೆ ಬಿಟ್ಟುಕೊಡುವಂತೆ ಒತ್ತಾಯಿಸಿ, ಇಲ್ಲವಾದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಸಿ ಹಲ್ಲೆಗೆ ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವೇಳೆ ಮೋಹನ ಅವರೊಂದಿಗೆ ಇದ್ದ ಧನಂಜಯ ಮಂಜಪ್ಪ ಆಲೂರು, ಚಂದನ ಶೇಖಪ್ಪ ಪಾಟೀಲ್ ಹಾಗೂ ಬಸವರಾಜ ಶಿವಪ್ಪ ವಡ್ಡರ್ ಅವರು ಮಧ್ಯಪ್ರವೇಶಿಸಿ ತಡೆದು ಬುದ್ಧಿಮಾತು ಹೇಳಿದ್ದಾರೆ. ಆದರೂ ಬಸವರಾಜ ಮತ್ತೆ ಹಲ್ಲೆಗೆ ಮುಂದಾದಾಗ ಮೋಹನ ಅವರು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಮೋಹನ ಅವರು ಸೆ.20ರಂದು ಬನವಾಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬಸವರಾಜ ಯತ್ರಾಯಪ್ಪ ಶಿಳ್ಳೇರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.