ಜಮ್ಮು-ಕಾಶ್ಮೀರ: ದೇಶದಾದ್ಯಂತ ತನ್ನ ಪರಾಕ್ರಮ ಮತ್ತು ಶೌರ್ಯದಿಂದ ಗಮನಸೆಳೆದಿದ್ದ ಭಾರತೀಯ ಸೇನೆಯ ಆರ್ಮಿ ಡಾಗ್ ‘ಟೈಸನ್’ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಛತ್ರೂ ಪ್ರದೇಶದಲ್ಲಿ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಕಾರ್ಯಾಚರಣೆ ವೇಳೆ ಕಾಲಿಗೆ ಗುಂಡು ತಗುಲಿದರೂ ಕೂಡ ತನ್ನ ಕರ್ತವ್ಯದಿಂದ ಹಿಂದೆ ಸರಿಯದೇ ಭದ್ರತಾ ಪಡೆಗಳಿಗೆ ನೆರವಾದದ್ದು ಗಮನಾರ್ಹವಾಗಿದೆ.
ಭಾರತೀಯ ಸೈನ್ಯದ 2 ಪ್ಯಾರಾ (ವಿಶೇಷ ಪಡೆ) ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜರ್ಮನ್ ಶೆಫರ್ಡ್ ತಳಿಯ ಟೈಸನ್, ಛತ್ರೂನ ಕಠಿಣ ಮತ್ತು ಒರಟಾದ ಭೂಪ್ರದೇಶದಲ್ಲಿ ಅಡಗಿ ಕುಳಿತಿದ್ದ ಉಗ್ರರ ತಾಣವನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿತು. ಅದರ ಸುಳಿವು ಆಧರಿಸಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ Jaish-e-Mohammed ಸಂಘಟನೆಗೆ ಸೇರಿದ ಮೂವರು ಉಗ್ರರನ್ನು ಹೊಡೆದುರುಳಿಸಲಾಯಿತು.
ಉಗ್ರರು ಹಲವು ದಿನಗಳಿಂದ ಭದ್ರತಾ ಪಡೆಗಳೊಂದಿಗೆ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಈ ಭಾಗದಲ್ಲಿ ಅಡಗಿ ತಿರುಗಾಡುತ್ತಿದ್ದ ಹಾಗೂ ಕನಿಷ್ಠ 20 ಬಾರಿ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದ ಜೆಇಎಂ ಉಗ್ರ ಸೈಫುಲ್ಲಾ ಕೂಡ ಹತನಾದವರಲ್ಲಿ ಒಬ್ಬನಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆ ಉಗ್ರರ ವಶದಿಂದ ಎರಡು ಎಕೆ-47 ರೈಫಲ್ಗಳು, ಮದ್ದುಗುಂಡುಗಳು ಸೇರಿದಂತೆ ಹಲವು ಸಶಸ್ತ್ರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಟೈಸನ್ ಗಾಯಗೊಂಡಿದ್ದರೂ ಕೂಡ ತನ್ನ ಶೌರ್ಯ ಮತ್ತು ನಿಷ್ಠೆಯಿಂದ ಮತ್ತೊಮ್ಮೆ ಸೇನೆಯ ಸಾಮರ್ಥ್ಯವನ್ನು ತೋರಿಸಿದ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.