ಹಾಸನ: ರಾಜ್ಯದಲ್ಲಿ ಮತ್ತೊಂದು ಎಟಿಎಂ ಹಣ ದುರುಪಯೋಗದ ಪ್ರಕರಣ ಬಹಿರಂಗವಾಗಿದೆ. ಎಟಿಎಂ ಯಂತ್ರಗಳಿಗೆ ಹಣ ತುಂಬಿಸುವ ಹೊಣೆ ಹೊತ್ತಿದ್ದ ಕಂಪನಿಯ ಸಿಬ್ಬಂದಿಯೇ ಸುಮಾರು 3 ಕೋಟಿ ಹಣವನ್ನು ದುರುಪಯೋಗಪಡಿಸಿಕೊಂಡು ಪರಾರಿಯಾಗಿರುವ ಘಟನೆ ಹಾಸನದಲ್ಲಿ ಬೆಳಕಿಗೆ ಬಂದಿದೆ.
ಹಾಸನ ನಗರದಲ್ಲಿ ವಿವಿಧ ಬ್ಯಾಂಕ್ಗಳ ಎಟಿಎಂಗಳಿಗೆ ಹಣ ಪೂರೈಸುವ ಜವಾಬ್ದಾರಿ ಹೊಂದಿದ್ದ ಕ್ಯಾಶ್ ಮ್ಯಾನೇಜ್ಮೆಂಟ್ ಸರ್ವೀಸ್ (ಸಿಎಂಎಸ್) ಸಂಸ್ಥೆಯ ಕೆಲ ಸಿಬ್ಬಂದಿಗಳು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಎಟಿಎಂಗಳಿಗೆ ಹಣ ಜಮೆ ಮಾಡಿದ್ದೇವೆ ಎಂಬ ಸುಳ್ಳು ದಾಖಲೆಗಳನ್ನು ನೀಡಿದ್ದರೂ, ಆಡಿಟ್ ಪರಿಶೀಲನೆಯ ವೇಳೆ ಲೆಕ್ಕದಲ್ಲಿ ವ್ಯತ್ಯಾಸ ಕಾಣಿಸಿಕೊಂಡಿದೆ.
ಪ್ರಾಥಮಿಕ ಮಾಹಿತಿಯಂತೆ, ಸಂಸ್ಥೆಯ ನಂದೀಶ್ ಮತ್ತು ಮಧು ಎಂಬ ಸಿಬ್ಬಂದಿಗಳ ಮೇಲೆ ಅನುಮಾನ ವ್ಯಕ್ತವಾಗಿದೆ. ಹಾಸನದ ಗೌರಿಕೊಪ್ಪಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಎಂಎಸ್ ಕಚೇರಿಗೆ ನಗರದಲ್ಲಿನ ಕೆನರಾ ಬ್ಯಾಂಕ್, ಎಸ್ಬಿಐ ಸೇರಿದಂತೆ ಒಟ್ಟು 15 ಬ್ಯಾಂಕ್ಗಳ 28 ಎಟಿಎಂಗಳಿಗೆ ಹಣ ತುಂಬಿಸುವ ಜವಾಬ್ದಾರಿ ನೀಡಲಾಗಿತ್ತು. ಹಣ ತುಂಬಿಸುವ ಸಂದರ್ಭದಲ್ಲೇ ಸುಮಾರು ಮೂರು ಕೋಟಿ ರೂಪಾಯಿ ಹಣವನ್ನು ಎಗರಿಸಲಾಗಿದೆ ಎನ್ನಲಾಗಿದೆ.
ಬೆಂಗಳೂರಿನಿಂದ ಆಗಮಿಸಿದ ಉನ್ನತ ಅಧಿಕಾರಿಗಳ ತಂಡ ಸ್ಥಳದಲ್ಲೇ ಪರಿಶೀಲನೆ ನಡೆಸಿ ಲೆಕ್ಕಪತ್ರಗಳನ್ನು ವಶಪಡಿಸಿಕೊಂಡಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಘಟನೆ ಎಟಿಎಂ ಹಣ ಸಂಗ್ರಹ ಮತ್ತು ವಿತರಣೆ ವ್ಯವಸ್ಥೆಯ ಮೇಲಿನ ಭದ್ರತೆ ಹಾಗೂ ಮೇಲ್ವಿಚಾರಣೆ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಎತ್ತುವಂತಾಗಿದೆ.